ತುಳು ಲಿಪಿ ಕೃತಿ ಬಿಡುಗಡೆ
ಮಂಗಳೂರು, ಮೇ 21: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಕೇರಳ ತುಳು ಅಕಾಡಮಿಗಳಿಂದ ಅಧಿಕೃತವೆಂದು ಅಂಗೀಕೃತವಾದ ತುಳು ಲಿಪಿ ಪರಿಚಯದ ಪರಿಷ್ಕೃತ ಮುದ್ರಣದ ತುಳು ಲಿಪಿ ತಜ್ಞ ಡಾ. ರಾಧಕೃಷ್ಣ ಬೆಳ್ಳೂರು ಲಿಖಿತ ‘ತುಳು ಲಿಪಿ’ ಪುಸ್ತಕವನ್ನು ಅಕಾಡಮಿಯ ಸಿರಿಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಬಿಡುಗಡೆಗೊಳಿಸಿದರು.
ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮಾತನಾಡಿ ಕರ್ನಾಟಕ ಮತ್ತು ಕೇರಳ ತುಳು ಅಕಾಡಮಿಯಿಂದ ಅಂಗೀಕೃತ ಗೊಂಡಿರುವ ತುಳು ಲಿಪಿ ಮಾಲಿಕೆಯನ್ನು ಮುಂದೆ ಕಲಿಕೆಗಾಗಿ ಉಪಯೋಗಿಸಬೇಕು ಹಾಗೂ ಅಕಾಡಮಿಯ ಮೂಲಕ ತುಳು ಯುನಿಕೋಡ್ ಬಳಕೆಯ ನಿಟ್ಟಿನಲ್ಲಿ ಮುಂದಿನ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ, ಸದಸ್ಯರಾದ ಲೀಲಾಕ್ಷ ಕರ್ಕೇರ, ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ, ಡಾ. ಆಕಾಶ್ರಾಜ್ ಜೈನ್, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್, ಜಯಲಕ್ಷ್ಮಿ ಪಿ ರೈ, ಕಡಬ ದಿನೇಶ್ ರೈ, ತಾರಾ ಉಮೇಶ್ ಆಚಾರ್ಯ, ಚೇತಕ್ ಪೂಜಾರಿ, ಪಿ.ಎಂ. ರವಿ ಉಪಸ್ಥಿತರಿದ್ದರು.