ಶಿರ್ವ: ವಿಷ ಬೆರೆಸಿದ ಮೀನು ತಿಂದು 15 ಬೆಕ್ಕುಗಳ ಸಾವು
ಶಿರ್ವ, ಮೇ 22: ವಿಷ ಬೆರೆಸಿ ಬೇಲಿಯ ಪಕ್ಕ ಇಡಲಾದ ಮೀನನ್ನು ತಿಂದು 15 ಬೆಕ್ಕುಗಳು ಸಾವನ್ನಪ್ಪಿರುವ ಘಟನೆ ಮೇ 21ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಂಟಕಲ್ಲು ಅರಸಿಕಟ್ಟೆ ಎಂಬಲ್ಲಿ ನಡೆದಿದೆ.
ಬೆಕ್ಕುಗಳ ಸಾವಿಗೆ ಕಾರಣನಾದ ಆರೋಪಿ, ನಿವೃತ್ತ ಶಿಕ್ಷಕ ಗೋಪಾಲ ಎಂಬವರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಅರಸಿಕಟ್ಟೆಯ ಸುಜಯ ಎಂಬವರ ಮನೆಯ ಬೇಲಿಯ ಸಮೀಪ ಆರೋಪಿ ಗೋಪಾಲ ಎಂಬಾತ ಮೀನಿಗೆ ವಿಷ ಪದಾರ್ಥವನ್ನು ಬೆರೆಸಿ ಹಾಕಿದ್ದು, ಈ ಮೀನನ್ನು ಪರಿಸರದ ಮೂರು ನಾಲ್ಕು ಮನೆಗಳ ಬೆಕ್ಕುಗಳು ತಿಂದಿತ್ತು ಎನ್ನಲಾಗಿದೆ. ಇದರ ಪರಿಣಾಮ ಒಟ್ಟು 15 ಬೆಕ್ಕುಗಳು ಸಾವನ್ನಪ್ಪಿದೆ ಎಂದು ದೂರಲಾಗಿದೆ.
ಈ ವಿಚಾರವನ್ನು ಪ್ರಶ್ನಿಸಿದಕ್ಕೆ ಆರೋಪಿ ಗೋಪಾಲ, ಸುಜಯ್ ಹಾಗೂ ನೆರೆಕರೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story