ಜಪ್ಪಿನಮೊಗರು: ರಾಜಕಾಲುವೆ ಒತ್ತುವರಿ ತೆರವು
ಮಂಗಳೂರು, ಮೇ 26: ಮಳೆಗಾಲ ಹತ್ತಿರವಾಗುತ್ತಿದ್ದಂತೆ ನಗರದ ರಾಜಕಾಲುವೆಗಳಲ್ಲಿ ಅಕ್ರಮ ರಸ್ತೆ ಸಂಪರ್ಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಂಗಳೂರು ಮಹಾನಗರ ಆರಂಭಿಸಿದೆ.
ಮೇಯರ್ ದಿವಾಕರ ಪಾಂಡೇಶ್ವರ ಹಾಗೂ ಆಯುಕ್ತ ಶಾನಾಡಿ ಅಜಿತ್ ಕುಮರ್ಿ ಹೆಗ್ಡೆ ನೇತೃತ್ವದಲ್ಲಿ ಇಂದು ಜಪ್ಪಿನಮೊಗರುವಿನ ಹೆದ್ದಾರಿ ಬದಿಯಲ್ಲಿ ಸ್ಥಳೀಯರ ದೂರಿನ ಮೇರೆಗೆ,ಅಕ್ರಮವಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ತೆರವುಗೊಳಿಸಲಾಯಿತು.
ಜಪ್ಪಿನಮೊಗರುವಿನಲ್ಲಿ ರಾಜಕಾಲುವೆಗೆ ಸಣ್ಣ ಪೈಪ್ ಹಾಕಿ ಮೇಲಿಂದ ರಸ್ತೆ ಮಾಡಲಾಗಿತ್ತು. ಸಣ್ಣ ಪೈಪ್ನಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿದ್ದ ಬಗ್ಗೆ ಪಾಲಿಕೆಗೆ ಈ ಹಿಂದೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಂದು ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಸ್ಥಳೀಯ ಮನಪಾ ಸದಸ್ಯೆ ವೀಣಾಮಂಗಳ ಉಪಸ್ಥಿತಿಯಲ್ಲಿ ತೆವು ಕಾರ್ಯಾಚರಣೆ ನಡೆಸಲಾಯಿತು.
ರಾಜಕಾಲುವೆ ಒತ್ತುವರಿ ವರದಿ ಮೂಲೆಗುಂಪು
2018ರ ಮೇ 29ರಂದು ಭಾರೀ ಮಳೆಯಿಂದಾದ ಮಂಗಳೂರಿನಲ್ಲಿ ಅನಾಹುತ ಘಟಿಸಿತ್ತು. ಇದಕ್ಕೆ ಮಂಗಳೂರಿನ ಅಸಮರ್ಪಕ ರಾಜಕಾಲುವೆ ಗಳೇ ಕಾರಣ ಹಾಗೂ ಕೆಲವೆಡೆ ರಾಜಕಾಲುವೆ ಒತ್ತುವರಿ ಆಗಿದ್ದೇ ಇದಕ್ಕೆ ಮುಖ್ಯ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿ ಕಾರಿ ಶಶಿಕಾಂತ್ ಸೆಂಥಿಲ್ ಅವರು ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ನೀಡುವ ವರದಿ ಆಧಾರದಲ್ಲಿ ಕ್ರಮಕೈಗೊಳ್ಳು ಬಗ್ಗೆ ಸೆಂಥಿಲ್ ಅವರು ತಿಳಿಸಿದ್ದರು. ಆದರೆ, ವರ್ಷ ಎರಡಾದರು ಕೂಡ ಮಧ್ಯಂತರ ವರದಿ ಬಿಟ್ಟು ಪೂರ್ಣ ವರದಿ ಇನ್ನೂ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಒತ್ತುವರಿ ತೆರವು ಹಾಗೆಯೇ ಬಾಕಿಯಾಗಿದೆ.
ಕಾರ್ಯಾಚರಣೆ ಪ್ರಾರಂಭ
ರಾಜಕಾಲುವೆ ಅತಿಕ್ರಮಣ ಮಾಡಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ. ಆದರೆ, ಮಂಗಳೂರಿನಲ್ಲಿ ಕೆಲವು ಕಡೆಗಳಲ್ಲಿ ಇಂತಹ ಅತಿಕ್ರಮಣ ಆದ ಬಗ್ಗೆ ಮಾಹಿತಿಯಿದೆ. ಹೀಗಾಗಿ ಇದರ ವಿರುದ್ಧ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ. ಇದರಂತೆ ಜಪ್ಪಿನಮೊಗರು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಂಗಳವಾರದಿಂದ ಆರಂಭವಾಗಿದೆ. ಮಳೆಗಾಲಕ್ಕೆ ಸಂಬಂಧಿಸಿ ಮಳೆ ನೀರು ಸರಾಗವಾಗಿ ಹರಿಯಲು ಒಳಚರಂಡಿಗಳ ಹೂಳೆತ್ತುವ ಕಾಮಗಾರಿಯೂ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ವಾರದೊಳಗೆ ಮುಗಿಯಲಿದೆ.
- ಶಾನಾಡಿ ಅಜಿತ್ ಕುಾರ್ ಹೆಗ್ಡೆ, ಆಯುಕ್ತರು, ಮನಪಾ