ಹಲಾಲ್ ಬೋರ್ಡ್ ಹಾಕಿರುವ ಹೋಟೆಲ್ಗಳನ್ನು ಬಹಿಷ್ಕರಿಸಿ: ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆ
ಉಡುಪಿ, ಮೇ 28: ಯಾವುದೇ ಹಿಂದೂಗಳ ಹೋಟೆಲ್ಗಳಲ್ಲಿ ಹಲಾಲ್ ಎಂಬ ಬೋರ್ಡ್ ಇದ್ದರೆ ಅಥವಾ ಯಾವುದೇ ವಸ್ತುಗಳ ಪೊಟ್ಟಣದ ಮೇಲೆ ಹಲಾಲ್ ಎಂದು ಬರೆದಿದ್ದರೆ ಅದು ಮುಸಲ್ಮಾನರ ಶರಿಯತ್ ಕಾನೂನು ಪಾಲಿಸುವವರಿಗೆ ಮಾತ್ರ; ಹಿಂದೂಗಳಿಗಲ್ಲ. ಹಿಂದೂಗಳು ಇವುಗಳನ್ನು ಬಹಿಷ್ಕರಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಕೆಲವು ಹೋಟೆಲ್ಗಳ ಬೋರ್ಡ್ಗಳಲ್ಲಿ ‘ಹಲಾಲ್’ ಎಂದು ಬರೆಯಲಾಗುತ್ತದೆ. ‘ಹಲಾಲ್’ ಎಂಬುದು ಮುಸ್ಲಿಮರ ನಂಬಿಕೆ. ಮುಸ್ಲಿಮರು ಹಲಾಲ್ ಮಾಡಿದ ಮಾಂಸವನ್ನು ತಿನ್ನಬೇಕು ಮತ್ತು ಮುಖಕ್ಕೆ ಮುಖ ಮಾಡಿ ಕುರ್ ಆನಿನ ವಿಧಿಯ ಪಠಿಸಿ ಪ್ರಾಣಿಯನ್ನು ಮುಸ್ಲಿಮನಿಂದಲೇ ವಧೆ ಮಾಡಬೇಕು. ಶರಿಯಾ ಪಾಲಿಸುವವನಾಗಿರಬೇಕು ಎಂದು ಹೇಳುತ್ತದೆ. ಆದರೆ ಹಿಂದೂಗಳ ಹೋಟೆಲ್ನಲ್ಲಿ ಹಲಾಲ್ ಎಂದು ಬರೆದು ಹಲಾಲ್ ಮಾಡಿದ ಕುರಿ, ಕೋಳಿಯನ್ನು ಹಿಂದೂಗಳಿಗೆ ತಿನ್ನಿಸುವುದು ಎಷ್ಟರ ಮಟ್ಟಿಗೆ ಸರಿ. ಇದು ಹಿಂದೂಗಳ ಮೇಲೆ ಶರಿಯಾ ಕಾನೂನು ಹೇರುವ ಪರೋಕ್ಷ ಪ್ರಯತ್ನವಲ್ಲವೇ, ಇದರಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ ಎಂದು ಕುಯಿಲಾಡಿ ಅವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.