ಗೂಡಿನಬಳಿ ಯುವಕರಿಗೆ ಎಸ್ಕೆಎಸ್ಸೆಸ್ಸೆಫ್ ದ.ಕ. ಸಮಿತಿಯಿಂದ ಸನ್ಮಾನ
ಬಂಟ್ವಾಳ, ಮೇ 29: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಜೀವ ರಕ್ಷಿಸಲು ಕೊನೆ ಕ್ಷಣದವರೆಗೆ ಪ್ರಯತ್ನಿಸಿದ ತಾಲೂಕಿನ ಗೂಡಿನಬಳಿಯ ಯುವಕರನ್ನು ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜೀವದ ಹಂಗನ್ನು ತೊರೆದು 12ರಿಂದ 15 ಅಡಿ ಆಳದ ನೀರಿಗೆ ಜಿಗಿದು ಯುವಕನನ್ನು ರಕ್ಷಣೆ ಮಾಡಲು ಪ್ರಯತ್ನಿಸಿರುವುದು ಹಾಗೂ ಕೊರೋನದಿಂದ ಪರಸ್ಪರ ಭೇಟಿಯಾಗಲೂ ಭಯಪಡುವ ಈ ಸಮಯದಲ್ಲಿ ನೀರಿಗೆ ಹಾರಿದ ಯುವಕನ ಬಾಯಿಗೆ ಬಾಯಿ ಇಟ್ಟು ಉಸಿರನ್ನು ಕೊಡಲು ಪಯತ್ನಿಸಿದ ಸೇವೆ ಜಗತ್ತಿಗೆ ಮಾನವೀಯ ಸಂದೇಶ ರವಾನಿಸಿದೆ. ಈದುಲ್ ಫಿರ್ ದಿನದಂದು ಇಂತಹಾ ಸೇವೆ ಸಮಾಜಕ್ಕೆ ಮಾದರಿ ಸಂದೇಶವನ್ನು ನೀಡಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ನಾಯಕರು ಶ್ಲಾಘಿಸಿದ್ದಾರೆ.
ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು. ಅಬೂ ಸ್ವಾಲಿಹ್ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬೂಬಕರ್ ರಿಯಾಝ್ ರಹ್ಮಾನಿ ಕಿನ್ಯ ಹಾಗೂ ಇಕ್ಬಾಲ್ ಬಾಳಿಲ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಜಿಲ್ಲಾ ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಅಬ್ದುಲ್ ಅಝೀಝ್ ಮಲಿಕ್, ವರ್ಕಿಂಗ್ ಕಾರ್ಯದರ್ಶಿ ಆರಿಫ್ ಬಡಕಬೈಲ್ ಜಾಬಿರ್ ಫೈಝಿ ಬನಾರಿ, ಶರೀಫ್ ಕೆಲಿಂಜ ವಿಖಾಯ ನಾಯಕ ಮುಸ್ತಫ ಕಟ್ಟದಪಡ್ಪು, ಸ್ಥಳೀಯರಾದ ಲತೀಫ್ ಖಾನ್ ಉಬೈದುಲ್ಲ ಹಾಜಿ, ಅಶ್ಫಕ್, ಮುಹಮ್ಮದ್ ಹಾಜಿ, ಅಬ್ದುಲ್ ಖಾದರ್ ಜಿ., ಅಬ್ದುಲ್ ಹಮೀದ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.