ಟಾಸ್ಕ್ಫೋರ್ಸ್ ಸಮಿತಿ, ಗ್ರಾಪಂ ನೌಕರರ ಕರ್ತವ್ಯಕ್ಕೆ ಅಡ್ಡಿ: ದೂರು
ಪಡುಬಿದ್ರಿ, ಮೇ 30: ಕೋವಿಡ್-19 ಹಿನ್ನೆಲೆಯಲ್ಲಿ ರಚನೆಗೊಂಡ ಮುದರಂಗಡಿ ಗ್ರಾಪಂ ಇದರ ಗ್ರಾಮೀಣ ಟಾಸ್ಕ್ಫೋರ್ಸ್ ಸಮಿತಿ ಹಾಗೂ ಗ್ರಾಪಂ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂತೂರು ಗ್ರಾಮದಲ್ಲಿರುವ ಬಿಜು ಎಂಬವರಿಗೆ ಸೇರಿದ ಯುಪಿಸಿಎಲ್ ವಿದ್ಯುತ್ ಘಟಕದ ಹಾರುವ ಬೂದಿಯಿಂದ ತಯಾರಿಸುವ ಎಮ್. ಸ್ಯಾಂಡ್ ಘಟಕದಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಮೇ 27ರಂದು ಪಿಡಿಓ ಜಯಂತ್ ಎನ್. ಹಾಗೂ ಟಾಸ್ಕ್ ಫೋರ್ಸ್ ಸಮಿತಿಯವರು ಭೇಟಿ ನೀಡಿದ್ದರು.
ಇಲ್ಲಿ ಹೊರರಾಜ್ಯದ 5 ಜನ ಕಾರ್ಮಿಕರು ಯಾವುದೇ ಮಾಸ್ಕ್, ಗ್ಲೌಸ್ ಧರಿಸದೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಸರಕಾರದ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವುದು ಕಂಡುಬಂತು. ಘಟಕಕ್ಕೆ ಸಂಬಂಧಿಸಿದ ದಾಖಲೆ ತೋರಿಸುವಂತೆ ಕೇಳಿದಾಗ ಘಟಕದ ಮಾಲಕ ಬಿಜು.ಟಿ.ಕೆ ಹಾಗೂ ಅವರ ಕಾರ್ಮಿಕರು ಇವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಬೆದರಿಕೆ ಹಾಕಿ ದ್ದಾರೆ ಎಂದು ದೂರಲಾಗಿದೆ.
ಅಲ್ಲದೇ ಕರೋನ ನಿಮಿತ್ತ ಗ್ರಾಮಸ್ಥರಿಗೆ ನೀಡುವ ಕಿಟ್ಗಳನ್ನು ಸಾಗಿಸಲು ಬಂದ ವಾಹನ ಚಾಲಕ ಸಂತೋಷ್ ಎಂಬವರಿಗೆ ಮೇ 28ರಂದು ಬಿಜು ದೂರವಾಣಿ ಕರೆಮಾಡಿ ಜೀವ ಬೆದರಿಕೆ ಹಾಕಿ, ಟಾಸ್ಕ್ ಫೋರ್ಸ್ ಸಮಿತಿಗೆ ಹಾಗೂ ಗ್ರಾಪಂ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಪಿಡಿಓ ಜಯಂತ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.