ಮಾನವತೆಯ ಸಾಕಾರಮೂರ್ತಿ ಡಾ. ಒಲಿಂಡಾ ಪಿರೇರಾ
ಮಂಗಳೂರು, ಮೇ 31: ಸಮಾಜ ಸೇವೆಯ ಉದ್ದೇಶದಿಂದ ಸ್ಥಾಪನೆಗೊಂಡ ವಿಶ್ವಾಸ್ ಟ್ರಸ್ಟ್ನ ಸಂಸ್ಥಾಪಕಿ, ಸಮಾಜ ಸೇವಾ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ನೀಡುವ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನ ಸ್ಥಾಪಕ ಪ್ರಾಂಶುಪಾಲೆ ಡಾ. ಒಲಿಂಡಾ ಪಿರೇರಾ (95) ಇಂದು ಮುಂಜಾನೆ ರೋಶನಿ ನಿಲಯದ ಭಗಿನಿಯರ ಗೃಹದಲ್ಲಿ ನಿಧನರಾಗಿದ್ದಾರೆ.
ತನ್ನ ಇಳಿ ವಯಸ್ಸಿನಲ್ಲೂ ಯುವಕರಂತೆ ಎಲ್ಲರೊಂದಿಗೆ ಬೆರೆಯುತ್ತಾ, ನಗಿಸುತ್ತಾ ಮಾನವತೆಯ ಸಾಕಾರಮೂರ್ತಿಯಾಗಿದ್ದವರು ಡಾ. ಒಲಿಂಡಾ ಪಿರೇರಾ. ಸಮಾಜ ಸೇವೆಯಲ್ಲಿ ಸಾರ್ಥಕ ಜೀವನ ಕಂಡಿದ್ದ ಒಲಿಂಡಾ ಪಿರೇರಾ ಕಳೆದ ವರ್ಷದವರೆಗೂ ದ.ಕ. ಕನ್ನಡ ಜಿಲ್ಲಾ ಮಟ್ಟದ ಸಭೆ, ಶಾಂತಿ ಸಭೆ ಸೇರಿದಂತೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಜೀವನ ಸ್ಫೂರ್ತಿಗೆ ಮಾದರಿಯಾಗಿದ್ದವರು. ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನ ಸ್ಥಾಪಕ ಪ್ರಾಂಶುಪಾಲೆಯಾಗಿದ್ದ ಡಾ. ಒಲಿಂಡಾ ಪಿರೇರಾ ರೋಶನಿ ನಿಲಯದ ಭಗಿನಿಯರ ನಿವಾಸದಲ್ಲಿಯೇ ವಾಸವಾಗಿದ್ದರು.
ಲಾಕ್ಡೌನ್ ಸಂದರ್ಭದಲ್ಲಿ (ಎಪ್ರಿಲ್ 14ರಂದು) ಬಿದ್ದು ಸೊಂಟಕ್ಕೆ ಗಾಯವಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡಿದ್ದರು. ಮಂಗಳೂರಿನಲ್ಲಿ 1925ರ ಆಗಸ್ಟ್ 15ರಂದು ಜನಿಸಿದ ಒಲಿಂಡಾ ಪಿರೇರಾ, ವಾರಣಾಸಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಪದವಿ, ಸೈಂಟ್ ಆ್ಯನ್ಸ್ ಕಾಲೇಜಿನಿಂದ ಬಿ.ಟಿ. ಪದವಿ, ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ (ಮದ್ರಾಸ್ ಯುನಿವರ್ಸಿಟಿ) ಬಿಎ ಪದವಿ ಪಡೆದಿದ್ದು, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಪಡೆದಿದ್ದ ಅಧ್ಯಯನ ಪ್ರಿಯೆ. ಸಮಾಜ ಸೇವೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಡುವ ಒತ್ತಾಸೆಯೊಂದಿಗೆ ವಿಶ್ವಾಸ್ ಟ್ರಸ್ಟ್ ಮೂಲಕ ಹಿರಿಯ ನಾಗರಿಕರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್, ರೋಶನಿ ನಿಲಯದ ಸ್ಥಾಪಕ ಪ್ರಾಂಶುಪಾಲೆಯಾಗಿ 1961-1984ರವರೆಗೆ ಸೇವೆ ಸಲ್ಲಿಸಿರುವ ಜತೆಗೆ, ಮಹಿಳೆಯರ ಪರ ವಿಶೇಷ ಕಾಳಜಿ ಹೊಂದಿದ್ದ ಅವರು, 1979ರಲ್ಲಿ ರಾಷ್ಟ್ರೀಯ ಮಹಿಳಾ ಸಮಿತಿಯ ಸದಸ್ಯರಾಗಿದ್ದರು. ಕೆನಡಾ ಹ್ಯಾಮಿಲ್ಟನ್ ಮೆಕ್ಮಾಸ್ಟರ್ ಯುನಿವರ್ಸಿಟಿಯ ವಿನಿಮಯ ಪ್ರಾಧ್ಯಾಪಕರಾಗಿ, 1985-1990ರವರೆಗೆ ಹೊಸದಿಲ್ಲಿಯ ಪ್ರಭಾತಾರ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ನ ನಿರ್ದೇಶಕರಾಗಿ,1991-94ರವೆಗೆ ಕೆನ್ಯ ನೈರೋಬಿಯ ಪ್ರಾವಿನ್ಸಿಯಲ್ ಹೌಸ್ನ ಆಡಳಿತ ಸಹಾಯಕರಾಗಿ, 1996ರಲ್ಲಿ ಫಿಲಿಫೈನ್ಸ್ನ ಮಾನಿಲದ ಇನ್ಸ್ಟಿಟ್ಯೂಟ್ ಆಫ್ ವುಮೆನ್ಸ್ನ ಇಂಟರ್ನಿಯಾಗಿಯೂ ತಮ್ಮ ಛಾಪನ್ನು ಮೂಡಿಸಿದ್ದರು.
ಬರಹಗಾರರೂ ಆಗಿದ್ದ ಡಾ. ಒಲಿಂಡಾ ಪಿರೇರಾ, ಮಕ್ಕಳನ್ನು ಅರ್ಥೈಸಿಕೊಳ್ಳುವುದು, ಪೂರ್ವ- ಹದಿಹರೆಯದವರಲ್ಲಿ ಹೊಂದಾಣಿಕೆ ಮತ್ತು ಅದರ ಪರಸ್ಪರ ಸಂಬಂಧಗಳು, ಗೃಹ ಕಾರ್ಮಿಕರ ಜೀವನಕ್ಕಾಗಿ ಹೋರಾಟ ಎಂಬ ವಿಷಯಗಳ ಕುರಿತು ಬರೆದ ಪುಸ್ತಕಗಳು ಪ್ರಕಟಗೊಂಡಿವೆ. ತಮ್ಮ ಇಳಿ ವಯಸ್ಸಿನಲ್ಲೂ ಪಾದರಸದಂತೆ ಚುರುಕಾಗಿದ್ದ ಡಾ. ಒಲಿಂಡಾ ಪಿರೇರಾ ಹಿರಿಯ ನಾಗರಿಕರಿಗಾಗಿನ ಸಹಾಯವಾಣಿ, ಹಿರಿಯರಿಗಾಗಿ ಗೋಲ್ಡನ್ ಏಜ್ ಇಕೋ ವಿಲೆಜ್ ಸ್ಥಾಪನೆ ಮೊದಲಾದ ಸಕ್ರಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು.
ಡಾ. ಒಲಿಂಡಾ ಪಿರೇರಾ ಸೇವೆಗೆ ಸಂದ ಪ್ರಶಸ್ತಿ, ಗೌರವಗಳು
ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿ, ಮೆಕ್ಮಾಸ್ಟರ್ ಯುನಿವರ್ಸಿಟಿ, ಹ್ಯಾಮಿಲ್ಟನ್ 1979. ಮಹಿಳಾ ಸಾಧಕಿ ಪ್ರಶಸ್ತಿ- ಸೈಂಟ್ ಆ್ಯಗ್ನೆಸ್ ಕಾಲೇಜು 1997. ಸಮಾಜ ಸೇವೆಗಾಗಿ ಸಂದೇಶ ಪ್ರಶಸ್ತಿ- 2002, ರಚನಾ ವರ್ಷದ ಮಹಿಳೆ - ಮಂಗಳೂರು ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್, 2008. ವರ್ಷದ ಮಹಿಳಾ ಪ್ರಶಸ್ತಿ- ಮಂಗಳೂರು ವಿಶ್ವವಿದ್ಯಾನಿಲಯ, 2009., ಸಮಾಜ ಸೇವೆಗಾಗಿ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ- 2011, ಅತ್ಯುತ್ತಮ ವ್ಯವಸ್ಥಾಪಕಿ ಪ್ರಶಸ್ತಿ 2011, ಮಂಗಳೂರು ಮ್ಯಾನೇಜ್ಮೆಂಟ್ ಅಸೋಸಿಯೇಶನ್ ವರ್ಷದ ಸಮುದಾಯ ನಾಯಕಿ- 2014-2015, ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ (ಐಐಪಿಪಿ), ಕರಾವಳಿ ಗೌರವ ಪ್ರಶಸ್ತಿ 2016, ದ.ಕ. ಜಿಲ್ಲಾಡಳಿತ. ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ- 2016.
‘‘ರೋಶನಿ ನಿಲಯ ಸಂಸ್ಥಾಪನೆಗೊಂಡ ಮೇ ತಿಂಗಳ ಕೊನೆಯ ದಿನದಂದೇ ಡಾ. ಒಲಿಂಡಾ ಪಿರೇರಾ ಕೊನೆಯುಸಿರೆಳೆದಿದ್ದಾರೆ. ಭೂಮಿ ಮೇಲೆ ತಮ್ಮ ಜೀವಿತದ ಉದ್ದೇಶವನ್ನು ಸಮರ್ಪಣೆ, ಬದ್ಧತೆ ಹಾಗೂ ಸಹಾನುಭೂತಿಯಿಂದ ಅವರು ಪೂರ್ಣಗೊಳಿಸಿದ್ದಾರೆ. ಮೇ 31 ಪವಿತ್ರಾತ್ಮದ ಆಚರಣೆ ಹಾಗೂ ರೋಶನಿ ನಿಲಯದ ದಿನವಾಗಿದ್ದು, ಈ ಪವಿತ್ರ ದಿನದಂದು ಅವರು ದೇವರ ಸ್ವರ್ಗದ ಮನೆಗೆ ತೆರಳಿದ್ದಾರೆ. ಮಾನವೀಯತೆಗೆ ಅವರು ನೀಡಿದ ದಣಿವರಿಯದ ಸೇವೆ ಅಭೂತಪೂರ್ವ’’ ಎಂದು ರೋಶನಿ ನಿಲಯದ ಪ್ರಾಂಶುಪಾಲರಾದ ಡಾ. ಜೂಲಿಯೆಟ್ ಸಿ.ಜೆ. ಸ್ಮರಿಸಿಕೊಂಡಿದ್ದಾರೆ.
ಇಂದು ಅಂತಿಮ ಸಂಸ್ಕಾರ
ಡಾ. ಒಲಿಂಡಾ ಪಿರೇರಾ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಜೂನ್ 1ರಂದು ಸಂಜೆ 3.30ಕ್ಕೆ ರೋಶನಿ ನಿಲಯದ ಧಪನ ಭೂಮಿಯಲ್ಲಿ ನಡೆಯಲಿದೆ. ಮೇ 31ರ ಸಂಜೆ 7 ಗಂಟೆಯವರೆಗೆ ರೋಶನಿ ನಿಲಯದ ಸಭಾಂಗಣದಲ್ಲಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಜೂ. 1ರ ಬೆಳಗ್ಗೆ 7ರಿಂದ ಸಂಜೆ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಮೃತರ ಅಂತ್ಯಸಂಸ್ಕಾರದ ಸಂದರ್ಭ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ ಎಂದು ರೋಶನಿ ನಿಲಯ ಸಂಸ್ಥೆಯ ಪ್ರಕಟನೆ ತಿಳಿಸಿದೆ.