ಶಂಕರನಾರಾಯಣ ಪೊಲೀಸ್ ಸಿಬ್ಬಂದಿಗೆ ಕೊರೋನ ಪಾಸಿಟಿವ್: ಸಂಶಯದಲ್ಲಿ ಮತ್ತೊಮ್ಮೆ ಪರೀಕ್ಷೆ - ಎಎಸ್ಪಿ ಹರಿರಾಮ್ ಶಂಕರ್
ಉಡುಪಿ, ಮೇ 31: ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಕೊರೋನ ಪರೀಕ್ಷಾ ವರದಿಯು ಪಾಸಿಟಿವ್ ಆಗಿ ಬಂದಿದ್ದು, ಈ ಬಗ್ಗೆ ಸಂಶಯ ಇರುವ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಮತ್ತೊಮ್ಮೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.
ಇದೊಂದು ಕೊರೋನ ಶಂಕಿತ ಪ್ರಕರಣವಾಗಿದ್ದು, ಈ ಸಿಬ್ಬಂದಿ ಹೊರಗಡೆ ಕರ್ತವ್ಯ ನಿರ್ವಹಿಸದ ಕಾರಣ ಮತ್ತು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ನಾಳೆ ಬೆಳಗ್ಗೆ ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಈ ವರದಿಯು ನಾಳೆ ಸಂಜೆ ಕೈ ಸೇರುವ ನಿರೀಕ್ಷೆ ಇದೆ ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆದುದರಿಂದ ನಾಳೆ ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುವುದು. ವರದಿ ನೆಗೆಟಿವ್ ಬಂದರೆ ಸಂಜೆಯ ಬಳಿಕ ಠಾಣೆಯು ಮತ್ತೆ ಕಾರ್ಯಾರಂಭ ಮಾಡಲಿದೆ. ಇದೊಂದು ಬಹುತೇಕ ತಪ್ಪು ಪಾಸಿಟಿವ್ ಪ್ರಕರಣವಾಗಿರುವುದರಿಂದ ಯಾವುದೇ ಸೀಲ್ಡೌನ್ ಆಗಲಿ, ಇತರ ಪ್ರಕ್ರಿಯೆಯನ್ನಾಗಲಿ ಮಾಡಲಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.