‘ಹೆಚ್ಚು ಶಬ್ದ ಮಾಡಿ ಮಿಡತೆ ಓಡಿಸಿ’ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರ ಸಲಹೆ
ಮಂಗಳೂರು, ಜೂ.1: ಇತ್ತೀಚೆಗೆ ಮಿಡತೆ ಕೀಟ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದರೂ ಅವು ಮರು ಭೂವಿಯ ಮಿಡತೆಗಳಲ್ಲ. ಆದಾಗ್ಯೂ, ಮಿಡತೆಗಳು ಕಂಡುಬಂದಲ್ಲಿ ಡ್ರಮ್/ ಪಾತ್ರೆಗಳನ್ನು ಬಡಿದು ಹೆಚ್ಚು ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.
ಬೇವಿನ ಮೂಲದ ಕೀಟನಾಶಕಗಳನ್ನು (ಶೇ.0.15 ಇ.ಸಿ 3ಎಂ.ಎಲ್/ಲೀ) ಬೆಳೆಗಳಿಗೆ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದನ್ನು ಕಡಿಮೆ ಮಾಡಬಹುದು. ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದಲೂ ಕೀಟವನ್ನು ಬೇರೆಡೆಗೆ ಓಡಿಸಬಹುದು ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕರು.
ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಬೇಕು. ಮರಿ ಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರಾಕ್ಟರ್ನ ಸಹಾಯದಿಂದ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು. ಆದರೆ ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಬೆಳೆ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೀಟನಾಶಕ ಕ್ಲೊರೋಪೈರಿಪಾಸ್ ಶೇ.20 ಎ.ಸಿ ಪ್ರತೀ ಹೆಕ್ಟರ್ಗೆ 1.2 ಲೀ., ಕೀಟನಾಶಕ ಕ್ಲೊರೋಪೈರಿಪಾಸ್ ಶೇ.50 ಇ.ಸಿ. ಪ್ರತೀ ಹೆಕ್ಟರ್ಗೆ 480 ಎಂ.ಎಲ್., ಕೀಟನಾಶಕ ಡೆಲ್ಟಮೆಥ್ರಿನ್ ಶೇ.2.8 ಇ.ಸಿ ಪ್ರತಿ ಹೆಕ್ಟೇರ್ಗೆ 450 ಎಂ.ಎಲ್., ಕೀಟನಾಶಕ ಫಿಪ್ರೊನಿಲ್ ಶೇ.5 ಇ.ಸಿ ಪ್ರತಿ ಹೆಕ್ಟೇರ್ಗೆ 125 ಎಂ.ಎಲ್., ಕೀಟನಾಶಕ ಲಾಮ್ಡಾಸಹಲೋಥ್ರಿನ್ ಶೇ.5 ಇ.ಸಿ. ಪ್ರತಿ ಹೆಕ್ಟೇರ್ಗೆ 400 ಎಂ.ಎಲ್., ಕೀಟನಾಶಕ ಲಾಮ್ಡಾಸಹಲೋಥ್ರಿನ್ ಶೇ.10 ಡಬ್ಲೂಪಿ ಪ್ರತಿ ಹೆಕ್ಟೇರ್ಗೆ 200 ಗ್ರಾಂ, ಕೀಟನಾಶಕ ಮಲಾಥಿಯಾನ್ ಶೇ.50 ಇ.ಸಿ. ಪ್ರತಿ ಹೆಕ್ಟೇರ್ಗೆ 1.85 ಲೀ., ಕೀಟನಾಶಕ ಮಲಾಥಿಯಾನ್ ಶೇ.25 ಡಬ್ಲೂಪಿ ಪ್ರತಿ ಹೆಕ್ಟೇರ್ಗೆ 3.7 ಕಿ.ಗ್ರಾಂ ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.