ಮಸೀದಿ ಪ್ರವೇಶ ಕುರಿತು ಸೌಕರ್ಯ ಅನುಸರಿಸಿ ನಿರ್ಧಾರ ತೆಗೆದುಕೊಳ್ಳಿ: ದ.ಕ ಜಿಲ್ಲಾ ಖಾಝಿ ನಿರ್ದೇಶನ
ಮಂಗಳೂರು, ಜೂ.2: ರಾಜ್ಯದ ಮಸೀದಿಗಳಲ್ಲಿ ಜೂ.8ರಿಂದ ನಮಾಝ್ ಮತ್ತಿತರ ಧಾರ್ಮಿಕ ಚಟುವಟಿಕೆ ನಡೆಸಲು ಸರಕಾರ ಅನುಮತಿ ನೀಡಿರುವುದು ಶ್ಲಾಘನೀಯ. ಈ ಮಧ್ಯೆ ಸರಕಾರದ ಮಾರ್ಗಸೂಚಿಯನ್ನೂ ಕಡ್ಡಾಯವಾಗಿ ಪಾಲಿಸುವುದು ಸಮುದಾಯದ ಕರ್ತವ್ಯವಾಗಿದೆ. ಹಾಗಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸಲು ಸಾಧ್ಯವಿರುವವರು ಮಾತ್ರ ಮಸೀದಿಗೆ ತೆರಳಬಹುದು ಅಥವಾ ಅದನ್ನು ಸಾಧ್ಯವಿರುವ ಆಡಳಿತ ಕಮಿಟಿಯು ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬಹುದು. ಈ ಬಗ್ಗೆ ಏನಿದ್ದರೂ ಕೂಡ ಆಯಾ ಜಮಾಅತ್ನವರು ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿರ್ದೇಶನ ನೀಡಿದ್ದಾರೆ.
ಸರಕಾರದ ಮಾರ್ಗಸೂಚಿ ಪಾಲಿಸಲು ಸಾಧ್ಯವಿರುವ ಮಸೀದಿಗಳಲ್ಲಿ ಆಯಾ ಜಮಾಅತ್ನವರೇ ಈ ಬಗ್ಗೆ ತೀರ್ಮಾನಿಸಿ ಜುಮಾ ಮತ್ತು ಜಮಾಅತ್ ನಮಾಝ್ ಗಳನ್ನು ನಿರ್ವಹಿಸಬಹುದು. ಈಗಲೂ ಕೊರೋನ ವೈರಸ್ ರೋಗವು ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ವಿಶ್ವವೇ ಭಯದ ವಾತಾವರಣದಲ್ಲಿದೆ. ಇಂತಹ ಸಂದರ್ಭದಲ್ಲಿ ನಮಾಝ್ ಗಳನ್ನು ಮನೆಗಳಲ್ಲೇ ನಿರ್ವಹಿಸಲು ಶರೀಅತ್ ಅನುಮತಿಸಿದೆ ಎಂದು ಖಾಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.