ಉಡುಪಿ ಜಿಲ್ಲೆಯಾದ್ಯಂತ ಮತ್ತೆ 16 ಗ್ರಾಮಗಳು ಸೀಲ್ಡೌನ್
ಉಡುಪಿ, ಜೂ.2: ಕೊರೋನ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿ ಇಂದು ಉಡುಪಿ ಜಿಲ್ಲೆಯಾದ್ಯಂತ ಒಟ್ಟು 16 ಪ್ರದೇಶಗಳನ್ನು ಸೀಲ್ಡೌನ್ ಮಾಡ ಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 57 ಗ್ರಾಮಗಳಲ್ಲಿ ಕಂಟೇನ್ಮೆಂಟ್ ವಲಯವನ್ನು ಘೋಷಿಸಲಾಗಿದೆ.
ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಹುನ್ಚಾರುಬೆಟ್ಟು ಮತ್ತು ಕಸಬ ಗ್ರಾಮದ ಕೋಡಿ ಹರಿಭಜನಾ ಮಂದಿರ ಸಮೀಪದ ಪ್ರದೇಶವನ್ನು ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಿ ಸೀಲ್ಡೌನ್ ಮಾಡಲಾಗಿದೆ. ಗಂಗೊಳ್ಳಿಯ ಜಾಮೀಯ ಮೊಹಲ್ಲಾವನ್ನು ಕಂಟೇನ್ ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಾಡು, ಬಸ್ರೂರು, ಕಂಡ್ಲೂರು ಗ್ರಾಮಗಳನ್ನು ಸೀಲ್ಡೌನ್ ಮಾಡ ಲಾಗಿದೆ. ಈ ಎಲ್ಲ ಪ್ರದೇಶದಲ್ಲಿ ಒಬ್ಬೊಬ್ಬರು ಸೋಂಕಿತರು ಕಂಡುಬಂದಿದ್ದಾರೆ.
ಬೈಂದೂರು ತಾಲೂಕಿನ ನಾಡಾ ಗ್ರಾಮದ ಪ್ರತ್ಯೇಕ ನಾಲ್ಕು ಮತ್ತು ಗೋಳಿ ಹೊಳೆ ಗ್ರಾಮದ ಪ್ರತ್ಯೇಕ ಮೂರು ಪ್ರದೇಶಗಳನ್ನು ಸೀಲ್ಡೌನ್ ಮಾಡ ಲಾಗಿದೆ. ಇಲ್ಲಿನ ಏಳು ಪ್ರತ್ಯೇಕ ಮನೆಗಳಲ್ಲಿ ಒಬ್ಬೊಬ್ಬರು ಸೋಂಕಿತರು ಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಆ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೇನ್ ಮೆಂಟ್ ರೆನ್ ಎಂಬುದಾಗಿ ಘೋಷಿಸಲಾಗಿದೆ.
ಜೂ.1ರಂದು ನಾಡಾ ಗ್ರಾಮದ ಒಂದು ಪ್ರದೇಶವನ್ನು ಸೀಲ್ಡೌನ್ ಮಾಡ ಲಾಗಿತ್ತು. ಇದರೊಂದಿಗೆ ಇಂದಿನ ನಾಲ್ಕು ಸೇರಿದಂತೆ ಒಂದೇ ಗ್ರಾಮದಲ್ಲಿ ಒಟ್ಟು ಐದು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ. ನಾಡಾ ಗ್ರಾಮ ದಲ್ಲಿ ಒಟ್ಟು ಎಂಟು ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ.
ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸಂತೆಕಟ್ಟೆಯಲ್ಲಿ ಒಂದು ವಸತಿ ಸಮುಚ್ಛಯವನ್ನು ಮತ್ತು ಇದೇ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಒಂದು ಮನೆ ಯನ್ನು ಸೀಲ್ಡೌನ್ ಮಾಡಲಾಗಿದೆ. ಇಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ಬಂದಿರುವುದು ವರದಿಯಾಗಿದೆ.
ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಕೃಷಿ ಕೇಂದ್ರ ಸಮೀಪದ ಮನೆ ಯೊಂದರ ಪ್ರದೇಶವನ್ನು ಕಂಟೇನ್ಮೆಂಟ್ ರೆನ್ ಮಾಡಲಾಗಿದೆ. ಕ್ವಾರಂಟೇನ್ ಅವಧಿ ಮುಗಿಸಿ ಬಂದಿರುವ ಇವರು, ಈ ಮನೆಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂ.1 ರಂದು ಇದೇ ಗ್ರಾಮದ ಒಂದು ಮನೆಯನ್ನು ಸೀಲ್ಡೌನ್ ಮಾಡಲಾಗಿತ್ತು.