ವೆನ್ಲಾಕ್ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೂ ಚಿಕಿತ್ಸೆ ನೀಡಿ: ಯುಟಿ ಖಾದರ್
ಮಂಗಳೂರು, ಜೂ.3: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದ ಬಳಿಕ ಜಿಲ್ಲೆ ಹಾಗೂ ನೆರೆಯ ಹಲವು ಜಿಲ್ಲೆಗಳ ಮಧ್ಯಮ ಹಾಗೂ ಬಡ ವರ್ಗದ ಜನರು ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ವೆನ್ಲಾಕ್ ಆಸ್ಪತ್ರೆಯನ್ನು ಮತ್ತೆ ಇತರ ಎಲ್ಲ ರೋಗಿಗಳಿಗೆ ಮುಕ್ತಗೊಳಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು ಶತಮಾನದ ಇತಿಹಾಸವಿರುವ ಮತ್ತು 1 ಸಾವಿರ ಬೆಡ್ಗಳ ಬೃಹತ್ ಆಸ್ಪತ್ರೆಯನ್ನು ಏಕಾಏಕಿ ಕೊರೋನ ಚಿಕಿತ್ಸೆಗೆಂದು ಖಾಲಿ ಮಾಡಲಾಗಿದೆ. ಆವಾಗ ಬಿಪಿಎಲ್ ಕಾರ್ಡ್ದಾರರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡ್ದಾರರಿಗೆ ಆರೋಗ್ಯ ಸುರಕ್ಷಾ ಸಮಿತಿ ಹಣದಿಂದ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿಕೊಂಡವರು ಇದೀಗ ಬಡ ರೋಗಿಗಳ ಸಂಕಷ್ಟ ಕೇಳುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೆನ್ಲಾಕ್ಗೆ ರೋಗಿಗಳು ಹೋದರೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆರೋಗ್ಯ ಕರ್ನಾಟಕ - ಆಯುಷ್ಮಾನ್ ಭಾರತ್ ಯೋಜನೆಯ ಕೋಡ್ ಬರಲು ಕನಿಷ್ಠ ಎರಡು ದಿನ ಆಗುತ್ತದೆ. ಆ ಎರಡು ದಿನಗಳ ಸಾವಿರಾರು ಮೊತ್ತದ ಶುಲ್ಕ ರೋಗಿಯೇ ಭರಿಸಬೇಕು. ಎಲ್ಲಾ ರೋಗಕ್ಕೂ ಈ ಕಾರ್ಡ್ ಅನ್ವಯ ಆಗುವುದಿಲ್ಲ. ಔಷಧಕ್ಕೆ ಸಾವಿರಾರು ರೂಪಾಯಿ ಬೇಕಾಗುತ್ತದೆ ಎಂದ ಖಾದರ್, ನಾನು ಆರೋಗ್ಯ ಸಚಿವನಾಗಿದ್ದಾಗ ವೆನ್ಲಾಕ್ ಕ್ಯಾಂಪಸ್ನಲ್ಲಿ ಮಲ್ಟಿ ಸ್ಪೆಷಾಲಿಟಿ ಬ್ಲಾಕ್ ನಿರ್ಮಿಸಿದ್ದೆ. ನಗರಭಿವೃದ್ಧಿ ಸಚಿವನಾಗಿದ್ದಾಗ ಐಸಿಯು ಬ್ಲಾಕ್ಗೆ ಬೇಕಾದ ಅನುದಾನ ಬಿಡುಗಡೆ ಮಾಡಿದ್ದೆ. ರಾಜ್ಯಕ್ಕೆ ಮಾದರಿಯಾದ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದ್ದೆ. ತಾಲೂಕು ಆಸ್ಪತ್ರೆಗಳಲ್ಲೂ ಆರಂಭಿಸಿದ್ದೆ. ಈಗ ನೋಡಿದರೆ ಜಿಲ್ಲಾ ಆಸ್ಪತ್ರೆಯನ್ನೇ ಮುಚ್ಚಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬಡವರ ಕಷ್ಟ ಕೇಳಲು ಯಾವುದೇ ನೋಡೆಲ್ ಅಧಿಕಾರಿಯೂ ಇಲ್ಲ ಎಂದು ಆಪಾದಿಸಿದರು.
ಈ ಬಾರಿ ಭಾರಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆದರೂ ಕೂಡ ಪ್ರಕೃತಿ ವಿಕೋಪ ನಿರ್ವಹಣೆ ಸಮಿತಿಯ ಸಭೆಯನ್ನು ಇನ್ನೂ ಕರೆದಿಲ್ಲ. ತಕ್ಷಣ ಸಂಸದರು, ಶಾಸಕರನ್ನು ಸೇರಿಸಿಕೊಂಡು ಕಂದಾಯ, ಅಗ್ನಿಶಾಮಕ, ಪೊಲೀಸ್, ಹೋಮ್ಗಾರ್ಡ್, ಮೆಸ್ಕಾಂ, ಮೀನುಗಾರಿಕೆ, ಕೋಸ್ಟ್ಗಾರ್ಡ್ ಸಹಿತ ತುರ್ತು ಇಲಾಖೆಗಳ ಸಭೆ ಕರೆಯಬೇಕು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಾದರ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ಗಳಾದ ಭಾಸ್ಕರ ಕೆ., ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಅಬ್ದುಲ್ ರವೂಫ್, ಕಾರ್ಪೋರೇಟರ್ ನವೀನ್ ಡಿಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಪಕ್ಷದ ಮುಖಂಡರಾದ ಶುಭೋದಯ ಆಳ್ವ, ಟಿ.ಕೆ.ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.
ಪಂಪ್ವೆಲ್ನಲ್ಲಿರುವುದು ಮಹಾವೀರ ವೃತ್ತ !: ಹಲವು ವರ್ಷಗಳ ಹಿಂದೆ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯ ನೇತೃತ್ವದಲ್ಲಿ ಅಂದಿನ ಸಂಸದ ವಿ.ಧನಂಜಯ ಕುಮಾರ್, ಶಾಸಕ ಯು.ಟಿ. ಫರೀದ್ ಸಹಿತ ಅನೇಕ ಪ್ರಮುಖರು ಪಂಪ್ವೆಲ್ಗೆ ‘ಮಹಾವೀರ ವೃತ್ತ’ ಎಂದು ನಾಮಕರಣ ಮಾಡಿ ಪವಿತ್ರ ಕಲಶವನ್ನಿಟ್ಟಿದ್ದರು. ಇದೀಗ ಅದೇ ವೃತ್ತಕ್ಕೆ ಸಾವರ್ಕರ್ ಹೆಸರಿನ ಫ್ಲೆಕ್ಸ್ ತಂದು ಹಾಕಿದ್ದಾರೆ. ಆ ಮೂಲಕ ಭಗವಾನ್ ಮಹಾವೀರರ ಹೆಸರಿಗೆ ಅವಮಾನ ಮಾಡಲಾಗಿದೆ. ಈ ಫ್ಲೆಕ್ಸ್ ಪ್ರಕಟಿಸಿದವರು ಮತ್ತು ಅದಕ್ಕೆ ಪ್ರಚೋದನೆ ಕೊಟ್ಟವರು ಯಾರು ಎಂದು ತನಿಖೆ ಮಾಡಬೇಕು ಮತ್ತು ಅವರ ಮೇಲೆ ಕೇಸು ದಾಖಲಿಸಬೇಕು. ಇದು ಸ್ಥಳೀಯ ಸಂಸದರು ಮತ್ತು ಶಾಸಕರ ಜವಾಬ್ದಾರಿ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಉತ್ತರಿಸಿದರು.