ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದ: ದಡಕ್ಕಪ್ಪಳಿಸಿದ ಬೃಹತ್ ಅಲೆಗಳು
ನಿಸರ್ಗ ಚಂಡಮಾರುತ ಎಫೆಕ್ಟ್
ಉಡುಪಿ, ಜೂ.3: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸೃಷ್ಠಿ ಯಾಗಿರುವ ‘ನಿಸರ್ಗ’ ಚಂಡಮಾರುತದ ಪರಿಣಾಮವಾಗಿ ಜಿಲ್ಲೆಯ ಕರಾವಳಿಯುದ್ದಕ್ಕೂ ಸಮುದ್ರ ಪ್ರಕ್ಷುಬ್ದವಾಗಿದ್ದು, ಮಲ್ಪೆ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಈಗಾಗಲೇ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಸುಮಾರು 90 ಬೋಟುಗಳು ವಾಪಾಸ್ಸು ಬರಲು ಬಾಕಿ ಇವೆ. ಇದರಲ್ಲಿ ಕೆಲವು ಬೋಟು ಗಳು ಗೋವಾದ ವಾಸ್ಕೋ ಬಂದರು ಮತ್ತು ಇನ್ನು ಕೆಲವು ಕಾರವಾರ ಬಂದರು ಗಳನ್ನು ಆಶ್ರಯಿಸಿಕೊಂಡಿವೆ. ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಲ್ಪೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಸಮುದ್ರದಲ್ಲಿ ಗಂಟೆಗೆ 35-45 ಕಿ.ಮೀ. ವೇಗದಲ್ಲಿ ಗಾಳಿ ಬೀಸು ತ್ತಿದ್ದು, ಪಡುಬಿದ್ರಿ, ಉದ್ಯಾವರ ಪಡುಕೆರೆ, ಕೋಡಿಬೆಂಗ್ರೆ, ಗಂಗೊಳ್ಳಿ, ಶಿರೂರು ಭಾಗದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹಲವು ಕಡೆಗಳ ತೀರ ಪ್ರದೇಶ ಗಳಲ್ಲಿ ಸಮುದ್ರ ಕೊರೆತಗಳು ಕಂಡುಬಂದಿವೆ. ಕೆಲವು ಪ್ರದೇಶಗಳಲ್ಲಿ ಅಲೆಗಳು ತೀರದಲ್ಲಿ ಹಾಕಿರುವ ತಡೆಗೋಡೆಗಳಿಗೆ ಬಡಿಯುತ್ತಿರುವುದು ಕಂಡುಬರುತ್ತಿದೆ. ಮನೆ ಹಾಗೂ ತೆಂಗಿನಮರಗಳಿಗೆ ಅಪಾಯ ಆಗಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ.
ಉಡುಪಿಯಲ್ಲಿ ಮುಂದುವರೆದ ಮಳೆ
ಉಡುಪಿ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 36.0 ಮೀ.ಮೀ., ಕುಂದಾಪುರ ತಾಲೂಕಿ ನಲ್ಲಿ 28.6ಮೀ.ಮೀ., ಕಾರ್ಕಳ ತಾಲೂಕಿನಲ್ಲಿ 36.4 ಮೀ.ಮೀ. ಮತ್ತು ಜಿಲ್ಲೆಯಲ್ಲಿ ಸರಸಾರಿ 32.9ಮೀ.ಮೀ.ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಉಡುಪಿ ತಾಲೂಕಿನ ಕುತ್ಪಾಡಿ ಗ್ರಾಮದ ರಾಮ ಎಂಬವರ ವಾಸದ ಮನೆಯು ಗಾಳಿಮಳೆಯಿಂದ ಹಾನಿಯಾಗಿದ್ದು, 10ಸಾವಿರ ರೂ. ನಷ್ಟ ಉಂಟಾ ಗಿದೆ. ಮೆಸ್ಕಾಂ ಉಡುಪಿ ವಿಭಾಗ ವ್ಯಾಪ್ತಿಯಲ್ಲಿ 22 ವಿದ್ಯುತ್ ಕಂಬಗಳು ಮತ್ತು ಒಂದು ಟ್ರಾನ್ಸ್ಫಾರ್ಮರ್ ಹಾಗೂ ಕುಂದಾಪುರ ವ್ಯಾಪ್ತಿಯಲ್ಲಿ ಎಂಟು ವಿದ್ಯುತ್ ಕಂಬಗಳು ಮತ್ತು ಐದು ಟ್ರಾನ್ಸ್ಫಾರ್ಮರ್ಗಳು ಧರೆಗೆ ಉರುಳಿ ಬಿದ್ದಿದ್ದು, ಇದರಿಂದ ಸುಮಾರು ನಾಲ್ಕು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.