ಲಾಕ್ಡೌನ್ನಿಂದ ಕಂಗಾಲಾದ ನೇಪಾಳ ಮೂಲದ ಕಾರ್ಮಿಕರು: ಬಸ್ಸಿನಲ್ಲಿ ತವರಿಗೆ ಹೊರಟ 40 ಕಾರ್ಮಿಕರು
ಪಡುಬಿದ್ರಿ: ಲಾಕ್ಡೌನ್ನಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಹೊಟೇಲ್ ಮತ್ತು ಪಾಸ್ಟ್ ಫುಡ್ಸ್ಟಾಲ್ಗಳಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ ನೇಪಾಳದ ಕಾರ್ಮಿಕರು ತವರಿಗೆ ಮರಳಲು ಆಗದೆ ಬಾಕಿಯಾದ ಸುಮಾರು 40 ಮಂದಿ ಕಾರ್ಮಿಕರು ಗುರುವಾರ ತವರಿಗೆ ಹೊರಟಿದ್ದಾರೆ.
ಕೊರೊನ ವೈರಸ್ ತಡೆಗಟ್ಟು ನಿಟ್ಟಿನಲ್ಲಿ ಉಂಟಾದ ಲಾಕ್ಡೌನ್ನಿಂದ ನೇಪಾಳದ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದರು. ದಿನ ಕಳೆದಂತೆ ಕೈಯಲ್ಲಿದ್ದ ಹಣವೆಲ್ಲಾ ಖಾಲಿಯಾಗಿತ್ತು. ಪಡುಬಿದ್ರಿಯಲ್ಲಿ ಫಾಸ್ಟ್ ಫುಡ್ ಸ್ಟಾಲ್ನಲ್ಲಿ ಕೆಲಸ ಮಾಡುತಿದ್ದ ನೇಪಾಳದ ಕಠ್ಮಂಡು ನಿವಾಸಿ ದೀಪಕ್ ಅಥಿಕಾರಿ ಇವರ ನೆರವಿಗೆ ಧಾವಿಸಿದರು. ಸುಮಾರು 20 ಮಂದಿ ಕಾರ್ಮಿಕರನ್ನು ತನ್ನ ಬಾಡಿಗೆ ಮನೆಯಲ್ಲಿರಿಸಿ ಅವರಿಗೆ ಬೇಕಾದ ಊಟೋಪಚಾರವನ್ನು ನೀಡಿ ಮಾನವೀಯತೆ ಮೆರೆದಿದ್ದರು.
ಈ 20 ಮಂದಿ ಕಾರ್ಮಿಕರನ್ನು ಊರಿಗೆ ಕಳುಹಿಸಲು ತನ್ನ ಊರಿನ ದಾನಿಗಳಿಗೆ ವಿಷಯ ತಿಳಿಸಿ ಅವರಿಂದ ಹಣ ಸಂಗ್ರಹಿಸಿದ್ದರು. ಸುಮಾರು ಎರಡು ಲಕ್ಷ ರೂ. ದಾನಿಗಳಿಂದ ಸಂಗ್ರಹಿಸಿ ಅಲ್ಪಸ್ವಲ್ಪ ಕಾರ್ಮಿಕರಿಂದ ಕೂಡಿಸಿ ಮಂಗಳೂರಿನ 20 ಕಾರ್ಮಿಕರು ಸೇರಿ ಒಟ್ಟು 40 ಕಾರ್ಮಿಕರನ್ನು ಗುರುವಾರ ಬಸ್ಸಿನ ಮೂಲಕ ಪಡುಬಿದ್ರಿ, ಮಂಗಳೂರು ಮೂಲಕ, ಹೈದರಬಾದ್, ತೆಲಂಗಾಣ ರಸ್ತೆಯಾಗಿ ನೇಪಾಳಕ್ಕೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಪಡುಬಿದ್ರಿಯ ಅಬ್ದುಲ್ ರಹಿಮಾನ್ ,ಜಮಾಲ್ ,ಅಶ್ರಫ್,ಜುಬೇರ್ ದೀಪಕ್ ಅಥಿಕಾರಿಗೆ ಸಾಥ್ ನೀಡಿದ್ದಾರೆ.