ಉಡುಪಿ ಕೃಷ್ಣನ ದರ್ಶನಕ್ಕೆ ಸದ್ಯಕ್ಕಿಲ್ಲ ಅವಕಾಶ: ಪರ್ಯಾಯಶ್ರೀ
ಉಡುಪಿ, ಜೂ.6: ರಾಜ್ಯ ಸರಕಾರ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಜೂ.8ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರಿಗೆ ಕೃಷ್ಣ ದರ್ಶನಕ್ಕೆ ಈ ತಿಂಗಳ ಕೊನೆಯವರೆಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನಿಸಿದೆ.
‘ಸರಕಾರ ಜೂ.8ರಿಂದ ದೇವಸ್ಥಾನ ತೆರೆಯುವ ಅವಕಾಶ ನೀಡಿದ್ದರೂ, ನಾವು ಭಕ್ತರಿಗೆ ಕೃಷ್ಣ ದರ್ಶನದ ಅವಕಾಶ ನೀಡುವ ಮುನ್ನ ಇನ್ನೂ 20-30ದಿನ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ಪರಿಸ್ಥಿತಿಗಳನ್ನು ಅವಲೋಕಿಸಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುತ್ತೇವೆ.’ ಎಂದು ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶ್ರೀಗಳು, ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಬೆಂಗಳೂರು ಹಾಗೂ ಇತರೆಡೆಗಳ ಭಕ್ತರು ಇದಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ನಮಗೆ ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿಗಳ ಆರೋಗ್ಯ ಮುಖ್ಯ. ಮಠದ ಒಳಗೂ 150 ಮಂದಿ ಇದ್ದಾರೆ ಎಂದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಪರಂಪರೆ, ಸಂಪ್ರದಾಯ ಇದ್ದು, ಇಲ್ಲಿ ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯವಿದೆ. ಇಲ್ಲಿನ ಪರಂಪರೆ ಉಳಿಸಿಕೊಂಡು ಬರಲು ತುಂಬಾ ಖರ್ಚಿದೆ. ಇಲ್ಲಿ ಪ್ರತಿದಿನ ಕಡಿಮೆ ಎಂದರೂ ಒಂದು ಲಕ್ಷ ರೂ. ಖರ್ಚು ಇದ್ದು, ಎಲ್ಲರ ಆರೋಗ್ಯದ ದೃಷ್ಟಿಯಿಂದ ಹಾಗೂ ಪರಂಪರೆ ಉಳಿಸುವ ದೃಷ್ಟಿಯಿಂದ ನಾವು ಈ ಈ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಲಾಕ್ಡೌನ್ ಸಂದರ್ಭದಲ್ಲೂ ನಮ್ಮೆಲ್ಲಾ ಸಿಬ್ಬಂದಿಗಳಿಗೆ ಸಂಬಳ ನೀಡಿದ್ದೇವೆ. ಮುಂದೆ ಪರಿಸ್ಥಿತಿಯನ್ನು ಅವಲೋಕಿಸಿ ಮಠವನ್ನು ಸಾರ್ವಜನಿಕರಿಗೆ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಈಗಲೂ ನಾವು ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಹೊರಗಿನವರು ಹಾಗೂ ಸಿಬ್ಬಂದಿಗಳು ಸೇರಿದಂತೆ ಸುಮಾರು 200 ಮಂದಿಗೆ ಊಟ ನೀಡುತಿದ್ದೇವೆ. ಅಲ್ಲದೆ ಸಾಧ್ಯವಿದ್ದಷ್ಟು ಬಡವರಿಗೆ ಕಿಟ್ಗಳನ್ನು ವಿತರಿಸಿದ್ದೇವೆ. ಆದುದರಿಂದ ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಪಯಾಯರ್ ಅದಮಾರುಶ್ರೀಗಳು ತಿಳಿಸಿದ್ದಾರೆ.