ಬೆಳ್ತಂಗಡಿ: ಶನಿವಾರ ನಾಲ್ವರಿಗೆ ಕೊರೋನ ಸೋಂಕು ದೃಢ
ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ ನಾಲ್ವರಿಗೆ ಕೊರೋನ ಸೋಂಕು ದೃಡಪಟ್ಟಿದ್ದು, ಇವರೆಲರೂ ಮುಂಬೈಯಿಂದ ಹಿಂತಿರುಗಿ ಕ್ವಾರಂಟೈನ್ ಮುಗಿಸಿ ಮನೆಗೆ ಬಂದವರಾಗಿದ್ದಾರೆ.
ವೇಣೂರು ಗ್ರಾಮ ಪಂಚಾಯತು ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಇಬ್ಬರಿಗೆ ರೋಗ ದೃಡಪಟ್ಟಿದ್ದು, ಸಾವ್ಯ ಗ್ರಾಮದ ಒಬ್ಬರಿಗೆ ಹಾಗೂ ಕಲ್ಮಂಜ ಗ್ರಾಮದ ಒಬ್ಬರಿಗೆ ರೋಗವಿರುವುದು ಪತ್ತೆಯಾಗಿದೆ.
ಇವರೆಲ್ಲರೂ ಮೇ 14 ರ ಸುಮಾರಿಗೆ ಮುಂಬೈಯಿಂದ ಊರಿಗೆ ಹಿಂತಿರುಗಿದ್ದರು. ಇವರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 14ದಿನಗಳ ಸರಕಾರಿ ಕ್ವಾರಂಟೈನ್ ಮುಗಿಸಿ ಬಳಿಕ ಮನೆಗಳಿಗೆ ಹಿಂತಿರುಗಿದ್ದರು. ಇದೀಗ ವಾರದ ಬಳಿಕ ಇವರ ಕೋವಿಡ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ.
ಇದು ಈ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಇವರ ಮನೆಗಳಿಗೆ ಭೇಟಿ ನೀಡಿದ್ದು, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಮನೆಯವರನ್ನೂ ಕ್ವಾರಂಟೈನ್ ಮಾಡಲಾಗಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ವಾರಂಟೈನ್ ಮುಗಿಸಿ ಒಂದುವಾರದ ಬಳಿಕ ಇದೀಗ ರೋಗ ಪತ್ತೆಯಾಗಿದ್ದು ಇವರು ಇತರರೊಂದಿಗೆ ಸಂಪರ್ಕ ಬೆಳೆಸಿದ್ದರೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾನಡೆಸಲಾಗುತ್ತಿದೆ.