ಮಂಗಳೂರಿಗೆ ಆಗಮಿಸಿದ ಎಕ್ಸ್ಪರ್ಟೈಸ್ ಕಂಪೆನಿಯ 2ನೇ ಬಾಡಿಗೆ ವಿಮಾನ
ದಮಾಮ್/ಮಂಗಳೂರು, ಜೂ.11: ಕೊರೋನ-ಲಾಕ್ಡೌನ್ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ತಮ್ಮ ಕಂಪೆನಿಯ ಉದ್ಯೋಗಿಗಳು ಹಾಗೂ ಅನಿವಾಸಿ ಕನ್ನಡಿಗರಿಗಾಗಿ ಎಕ್ಸ್ಪರ್ಟೈಸ್ ಕಂಪೆನಿಯು ದಮಾಮ್ನಿಂದ ಕಳುಹಿಸಿಕೊಟ್ಟ ವಿಶೇಷ ಬಾಡಿಗೆ ವಿಮಾನವು ಗುರುವಾರ ಸಂಜೆ 7:30ರ ವೇಳೆಗೆ ಮಂಗಳೂರು ತಲುಪಿತು. 170 ಪ್ರಯಾಣಿಕರು ತಾಯ್ನಾಡಿಗೆ ಮರಳಿದ್ದಾರೆ.
ಜೂ.7ರಂದು ಎಕ್ಸ್ಪರ್ಟೈಸ್ ಕಂಪೆನಿಯ ಮೊದಲ ಬಾಡಿಗೆ ವಿಮಾನವು ಮಂಗಳೂರಿಗೆ ಆಗಮಿಸಿತ್ತು. ಅದರಲ್ಲಿ 168 ಪ್ರಯಾಣಿಕರಿದ್ದರು. ಇವರೆಲ್ಲರೂ ಎಕ್ಸ್ಪರ್ಟೈಸ್ ಕಂಪೆನಿಯ ಅತಂತ್ರ ಸ್ಥಿತಿಯಲ್ಲಿದ್ದ ಉದ್ಯೋಗಿಗಳಾಗಿದ್ದರು. ಗುರುವಾರ ಮಧ್ಯಾಹ್ನ ದಮಾಮ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಎರಡನೇ ಬಾಡಿಗೆ ವಿಮಾನದಲ್ಲಿ ಕಂಪೆನಿಯ ಹೊರತಾದ 70 ಪ್ರಯಾಣಿಕರಿದ್ದರು. ಅದರಲ್ಲಿ ಹಿರಿಯರು, ಗರ್ಭಿಣಿಯರು, ಎಳೆಯ ಮಕ್ಕಳು ಸೇರಿದ್ದರು. ಎಲ್ಲರನ್ನೂ ನಗರದ ಲಾಡ್ಜ್/ಹೊಟೇಲ್ನಲ್ಲಿ ಕ್ವಾರಂಟೈನ್ಗೊಳಪಡಿಸಲಾಗಿದೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ ಎಕ್ಸ್ಪರ್ಟೈಸ್ ಕಂಟ್ರಾಕ್ಟಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಅಶ್ರಫ್ ಕರ್ನಿರೆ, ಜೂ.7ರಂದು ಕಂಪೆನಿಯ ವತಿಯಿಂದ ಮೊದಲ ಬಾಡಿಗೆ ವಿಮಾನ ಮಂಗಳೂರು ತಲುಪಿತ್ತು. ಗುರುವಾರ ಮಧ್ಯಾಹ್ನ ದಮಾಮ್ನಿಂದ ಹೊರಟ ಎರಡನೇ ವಿಶೇಷ ಬಾಡಿಗೆ ವಿಮಾನವು ಸಂಜೆ ಮಂಗಳೂರು ತಲುಪಿದೆ. ಕಂಪೆನಿಯ ನೌಕರರ ಜೊತೆಗೆ ತುರ್ತು ಹಾಗೂ ಅನಿವಾರ್ಯ ಕಾರಣಗಳಿಗಾಗಿ ಊರು ಸೇರಬೇಕಿದ್ದ 70ರಷ್ಟು ಮಂದಿ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡಿದ್ದೇವೆ. ಈವರೆಗೆ ನಮ್ಮ ಕಂಪೆನಿಯ ವತಿಯಿಂದ ಐದು ವಿಮಾನಗಳು ತಾಯ್ನಾಡಿಗೆ ಮರಳಿವೆ. ಇನ್ನೂ ನಾಲ್ಕು ವಿಮಾನಗಳು ಬರಲಿವೆ ಎಂದು ತಿಳಿಸಿದ್ದಾರೆ.