ಕೊಣಾಜೆ: ತಡೆಗೋಡೆ ಕುಸಿದು ಎರಡು ಮನೆಗಳಿಗೆ ಅಪಾರ ಹಾನಿ
ಮನೆಮಂದಿ ಅಪಾಯದಿಂದ ಪಾರು
ಕೊಣಾಜೆ : ಕೊಣಾಜೆ ಗ್ರಾಮದ ಪಟ್ಟೋರಿ ಹಾಗೂ ಪುಳಿಂಚಾಡಿ ಎಂಬಲ್ಲಿ ರವಿವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದು ಎರಡು ಮನೆಗಳಿಗೆ ಅಪಾರ ಹಾನಿಯಾದ ಘಟನೆ ನಡೆದಿದೆ.
ಪಟ್ಟೋರಿಯಲ್ಲಿ ಶಾಂತಪ್ಪ ಎಂಬವರ ಬಾಡಿಗೆ ಮನೆಯಲ್ಲಿ ತಿರುಮಲ ಸ್ವಾಮಿ ಅವರ ಕುಟುಂಬ ವಾಸವಾಗಿತ್ತು. ರವಿವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಮನೆಯಲ್ಲಿ ತಿರುಮಲ ಸ್ವಾಮಿಯವರ ಮಕ್ಕಳಾದ ಆಕಾಶ್, ಅಶ್ವಿತಾ ಹಾಗೂ ಮೂರು ವರ್ಷದ ಅರಾಧ್ಯ ಮನೆಯೊಳಗೆ ಇದ್ದಾಗ ಪಕ್ಕದ ಮನೆಯ ತಡೆಗೋಡೆಯು ಕುಸಿದು ಮನೆಯ ಮೆಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಮಕ್ಕಳು ಮನೆಯಿಂದ ಹೊರ ಓಡಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ತಡೆಗೋಡೆ ಕುಸಿದಿರುವುದರಿಂದ ಇದೀಗ ಪಕ್ಕದ ಮನೆಯೂ ಅಪಾಯದಲ್ಲಿದೆ. ಹಾನಿ ಪ್ರದೇಶಕ್ಕೆ ಕೊಣಾಜೆ ಗ್ರಾಮ ಕರಣಿಕ ಪ್ರಸಾದ್, ಗ್ರಾ.ಪಂ.ಸದಸ್ಯ ರವಿ, ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅತಂತ್ರ ಕುಟುಂಬಕ್ಕೆ ಆಶ್ರಯ: ತಡೆಗೋಡೆ ಕುಸಿದು ಅತಂತ್ರ ಸ್ಥೀತಿಯಲ್ಲಿರುವ ಪಟ್ಟೋರಿಯ ತಿರುಮಲ ಸ್ವಾಮಿಯವರ ಕುಟುಂಬಕ್ಕೆ ಅಸೈಗೋಳಿಯ ಪ್ರಕಾಶ್ ಶೆಟ್ಟಿಯವರು ಬೇರೆ ಕಡೆ ಆಶ್ರಯ ಕಲ್ಪಿಸಿ ಸಹಾಯ ಮಾಡಿದ್ದಾರೆ.
ಪುಳಿಂಚಾಡಿ: ಪುಳಿಂಚಾಡಿಯ ಆಂಟೊನಿ ವಿನ್ಸೆಂಟ್ ಲೋಬೋ ಅವರ ಮನೆಗೆ ಕೂಡಾ ರಾತ್ರಿ ಸುರಿದ ಭಾರೀ ಮಳೆಗೆ ಪಕ್ಕದ ಮನೆಯ ತಡೆಗೋಡೆ ಕುಸಿದ ಪರಿಣಾಮ ಹಾನಿಗೊಂಡಿದೆ. ಗೋಡೆ ಬಿರುಕು ಬಿಟ್ಟು ಮನೆಗೆ ಅಪಾರ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.