ಕೃಷಿಭೂಮಿ ಹಡಿಲು ಬಿಡುವುದು ಭೂಮಿತಾಯಿಗೆ ಮಾಡಿದ ದ್ರೋಹ: ರಘುಪತಿ ಭಟ್
ಉಡುಪಿ, ಜೂ.28: ದೇಶದ ಆರ್ಥಿಕತೆಯಲ್ಲಿ ಆಹಾರ ಉತ್ಪಾದನೆ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರ ಮೂಲ ಕೃಷಿ. ಕೃಷಿ ಕಾಯಕವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೃಷಿ ಭೂಮಿಯನ್ನು ಹಡಿಲು ಬಿಡದೆ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ನಿಟ್ಟೂರು ಪ್ರೌಢ ಶಾಲಾ ಸುವರ್ಣ ಪರ್ವದ ಪ್ರಯುಕ್ತ ರವಿವಾರ ಪುತ್ತೂರು ಮುಂದ್ರಪಾಡಿ ದೇವಸ್ಥಾನದಲ್ಲಿ ಆಯೋಜಿಸಲಾದ ಹಡಿಲು ಭೂಮಿ ಕೃಷಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೃಷಿ ಭೂಮಿಯನ್ನು ಹಡಿಲು ಬಿಡುವುದು ಭೂಮಿ ತಾಯಿಗೆ ಮಾಡಿದ ದ್ರೋಹವಾಗುತ್ತದೆ. ನಮ್ಮ ಹಿರಿಯರ ನಂಬಿಕೆ ಕೂಡ ಇದೆ ಆಗಿತ್ತು. ಕಾರ್ಮಿಕರ ಕೊರತೆ ಇದ್ದರೂ ಯಾಂತ್ರಿಕತೆಯೊಂದಿಗೆ ಕೃಷಿಯನ್ನು ಮಾಡುವತ್ತ ಗಮನಹರಿ ಬೇಕು ಎಂದು ಅವರು ತಿಳಿಸಿದರು.
ಶಾಸಕರು ನೇಜಿ ನೆಡುವುದರ ಮೂಲಕ ಸುಮಾರು ಮೂರು ಎಕ್ರೆ ಪ್ರದೇಶದಲ್ಲಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ನಿಟ್ಟೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ಸುವರ್ಣ ಪರ್ವದ ಅಧ್ಯಕ್ಷ ಯೋಗೀಶ್ ಚಂದ್ರಾಧರ್, ಬ್ರಹ್ಮಾವರ ಕೃಷಿ ಕೇಂದ್ರದ ಸಂಶೋಧಕ ಶಂಕರ್, ಕೃಷಿಕರಾದ ಶಂಕರ್ ಶೆಟ್ಟಿ, ದಾನಿಗಳಾದ ವಿಶ್ವನಾಥ್ ಶಣೈ, ನಿವೃತ್ತ ಮುಖ್ಯೋಪಾಧ್ಯಾಯ ಪಿ.ವೇಣುಗೋಪಾಲ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.