ಪ್ರತೀ ಜಮಾಅತ್ ವ್ಯಾಪ್ತಿಯಲ್ಲಿ ದಫನಕ್ಕೆ ವ್ಯವಸ್ಥೆ ಕಲ್ಪಿಸಲು ದ.ಕ. ಜಿಲ್ಲಾ ಖಾಝಿ ಕರೆ
ಕೊರೋನ ವೈರಸ್
ಮಂಗಳೂರು, ಜೂ. 29: ದೇಶದಲ್ಲಿ ಕೊರೋನ ಸೋಂಕು ಪ್ರಕರಣವು ತೀವ್ರವಾಗಿ ಹೆಚ್ಚುತ್ತಿದ್ದು, ಸಮುದಾಯದ ಹಲವು ಮಂದಿ ನಿಧನ ರಾಗಿರುತ್ತಾರೆ. ಮೃತದೇಹದ ಅಂತ್ಯಕ್ರಿಯೆಯಲ್ಲಿ ಯಾವುದೇ ತರಹದ ಗೊಂದಲಗಳು ಆಗದಂತೆ ಎಲ್ಲಾ ಜಮಾತರು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶಾಲವಾದ ದಫನ ಭೂಮಿಯಿರುವ ಜಮಾಅತಿನವರು ದಫನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಡುವುದು ಒಳ್ಳೆಯದು ಹಾಗೂ ಯಾವ ಜಮಾಅತ್ ವ್ಯಾಪ್ತಿಯಲ್ಲಿ ತೀರಿ ಹೋಗುತ್ತಾರೋ ಅದೇ ಜಮಾತ್ನವರು ದಫನ ಮಾಡಲು ಪ್ರಯತ್ನಿಸಬೇಕು. ಈಗಾಗಲೇ ಮಂಗಳೂರಿನ ಕೇಂದ್ರ ಜುಮಾ ಮಸೀದಿ, ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ, ಬೋಳಾರದ ಮುಹಿಯ್ಯುದ್ದೀನ್ ಜುಮಾ ಮಸೀದಿ, ಬಜ್ಪೆಯ ಜುಮಾ ಮಸೀದಿಯವರು ಈ ಬಗ್ಗೆ ವ್ಯವಸ್ಥೆ ಮಾಡಿರುತ್ತಾರೆ. ಈ ಸಂದರ್ಭ ಎಲ್ಲರೂ ಸಾಧ್ಯವಾದಷ್ಟು ಜಾಗೃತೆ ವಹಿಸಿಕೊಳ್ಳಬೇಕು ಮತ್ತು ಮಾಸ್ಕನ್ನು ಧರಿಸಬೇಕು ಹಾಗೂ ಜನರು ಗುಂಪು ಸೇರುವಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.