ಎಸೆಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆ : ಉಡುಪಿ ಜಿಲ್ಲೆಯಲ್ಲಿ 12947 ವಿದ್ಯಾರ್ಥಿಗಳು ಹಾಜರು
ಉಡುಪಿ, ಜು.1: ಕೊರೋನ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಒಟ್ಟು 51 ಕೇಂದ್ರಗಳಲ್ಲಿ ನಡೆದ ಎಸೆಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಗೆ ಒಟ್ಟು 12947 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 13742 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 588 ಮತ್ತು ಹಾಜರಾತಿ ಇಲ್ಲದೆ ಹಾಲ್ ಟಿಕೆಟ್ನಿಂದ ವಂಚಿತರಾದ 95 ಮಂದಿ ಸೇರಿದ್ದಾರೆ. ಇವರನ್ನು ಹೊರತು ಪಡಿಸಿ ಒಟ್ಟು 112 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಪರೀಕ್ಷೆಗೆ ಹಾಜರಾಗಲು ದಾಖಲಾತಿ ಮಾಡಿಕೊಂಡ ಒಟ್ಟು 456 ಖಾಸಗಿ ವಿದ್ಯಾರ್ಥಿಗಳ ಪೈಕಿ 379 ಮಂದಿ ಪರೀಕ್ಷೆ ಬರೆದು, 77 ಮಂದಿ ಗೈರು ಹಾಜರಾಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದು ನೋಂದಾಯಿಸಿಕೊಂಡ ಎಲ್ಲ 82 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
14 ಅನಾರೋಗ್ಯ ಪೀಡಿತರು
ಇಂದಿನ ಪರೀಕ್ಷೆಗೆ ಹಾಜರಾದ 8 ಮಂದಿ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಿದೆ. ಹೀಗೆ ಬೈಂದೂರು- 5, ಕುಂದಾಪುರ- 5, ಬ್ರಹ್ಮಾವರ -3, ಉಡುಪಿ ವಲಯದ ಒಬ್ಬರು ಸೇರಿದಂತೆ ಒಟ್ಟು 14 ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಿದ್ದಾರೆ.
ಕಂಟೈನ್ಮೆಂಟ್ ವಲಯಗಳಿಂದ ಒಟ್ಟು 10 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರೆಲ್ಲರು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆದರು. ಸೋಂಕಿತ ಎಸೆಸೆಲ್ಸಿ ವಿದ್ಯಾರ್ಥಿನಿಗಳು ಪರೀಕ್ಷೆ ಬರೆದ ಕುಂದಾಪುರ ಹಾಗೂ ಬೈಂದೂರು ಕೇಂದ್ರಗಳಲ್ಲಿ ಅವರೊಂದಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಿಗೆ ಬೇರೆ ಕೋಣೆಯ ವ್ಯವಸ್ಥೆ ಮಾಡಲಾಗಿತ್ತು.
ಇವರು ಆರು ಅಡಿ ಅಂತರದಲ್ಲಿ ಕುಳಿತು ಪರೀಕ್ಷೆ ಬರೆದರು. ಹೆಜಮಾಡಿ ಕೇಂದ್ರದಲ್ಲೂ ಇದೇ ವ್ಯವಸ್ಥೆ ಮುಂದುವರೆದಿತ್ತು. ಇಂದಿನ ಪರೀಕ್ಷೆಗೆ ಎಲ್ಲ ರೀತಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲೂ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳು ಹಾಗೂ ಅವ್ಯವಹಾರಗಳು ನಡೆದಿಲ್ಲ ಎಂದು ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.