ಪೌಷ್ಠಿಕ ಕೈತೋಟ, ಎರೆಗೊಬ್ಬರ ತಯಾರಿ ತರಬೇತಿ
ಉಡುಪಿ, ಜು.3: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ(ವಿಸ್ತರಣಾ ನಿರ್ದೇಶನಾಲಯ), ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬೃಹ್ಮಾವರ ಮತ್ತು ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪೇತ್ರಿ ಗ್ರಾಮದ ಪ್ರಸಾದ್ ಭಟ್ ಇವರ ಮನೆಯ ವಠಾರದಲ್ಲಿ ಪೌಷ್ಠಿಕ ಕೈತೋಟ ಮತ್ತು ಎರೆಗೊಬ್ಬರ ತಯಾರಿ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೌಷ್ಠಿಕ ಕೈತೋಟ ನಿರ್ಮಾಣ ಕುರಿತು ಚರ್ಚಿಸಲಾಯಿತು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಹೆಚ್.ಎಸ್, ಪೌಷ್ಠಿಕ ಕೈತೋಟ ಮಾಡುವ ರೈತ ಮಹಿಳೆಯರಿಂದ ಮನೆಯ ವಿವರ, ನಿತ್ಯ ಬಳಕೆಯಲ್ಲಿರುವ ಆಹಾರ ಪದ್ಧತಿ ಮತ್ತು ಪೋಷಕಾಂಶಗಳ ನ್ಯೂನ್ಯತೆ ಕುರಿತು ಮಾಹಿತಿಗಳನ್ನು ಪಡೆದುಕೊಂಡರು. ಮುಂಗಾರು ಸಮಯದಲ್ಲಿ ಕೈತೋಟ ಮಾಡುವ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿಗಳಾದ ಡಾ.ನವೀನ್ ಎನ್., ಮನೆ ಮತ್ತು ಕೃಷಿ ತ್ಯಾಜ್ಯ ಬಳಸಿ ಅದರಿಂದ ಎರೆಗೊಬ್ಬರ ತಯಾರಿಸುವ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀಟವಿಜ್ಞಾನಿ ಡಾ. ಸಚಿನ್ ಯು.ಎಸ್ ಉಪಸ್ಥಿತರಿದ್ದರು. ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿಯ ಅಧ್ಯಕ್ಷೆ ಪ್ರಸನ್ನಾ ಪಿ ಭಟ್ ಸ್ವಾಗತಿಸಿ, ಪ್ರಸಾದ್ ಭಟ್ ವಂದಿಸಿದರು.