ಲಾಕ್ಡೌನ್ನಿಂದ ಉಡುಪಿಯಲ್ಲಿ ಹೆಚ್ಚಿದ ಕೃಷಿ ಒಲವು
2575 ಕ್ವಿಂಟಾಲ್ ಬೀಜ ಖರೀದಿ: ಗುರಿ ಮೀರಿದ ಸಾಧನೆ ಸಾಧ್ಯತೆ
ಉಡುಪಿ, ಜು.6: ಕೊರೋನ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿದ್ದು, ಇದರಿಂದ ದೇಶ ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನೇಕ ಮಂದಿ ತಮ್ಮ ಹಳ್ಳಿಗಳಿಗೆ ಮರಳಿದ್ದಾರೆ. ಹೀಗೆ ನಿರುದ್ಯೋಗಿಗಳಾಗಿರುವ ಗಲ್ಫ್, ಮುಂಬೈ ಮತ್ತು ಬೆಂಗಳೂರಿನಿಂದ ಆಗಮಿಸಿರುವ ಉಡುಪಿ ಜಿಲ್ಲೆಯ ಹಲವು ಮಂದಿ, ಕೃಷಿ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ಹಡಿಲು ಬಿಟ್ಟಿದ್ದ ಕೃಷಿ ಭೂಮಿಯಲ್ಲೂ ಈ ಬಾರಿ ಉಳುಮೆ ಮಾಡಲಾಗುತ್ತಿದೆ.
ಉಡುಪಿ ಕೃಷಿ ಇಲಾಖೆ ಈ ಮುಂಗಾರಿಗೆ 36 ಸಾವಿರ ಹೆಕ್ಟೇರ್ನಲ್ಲಿ ಭೂಮಿಯಲ್ಲಿ ಕೃಷಿ ಮಾಡುವ ಗುರಿಯನ್ನು ಹೊಂದಿದೆ. ಆದರೆ ಲಾಕ್ಡೌನ್ನಿಂದಾಗಿ ಹಿಂದೆಂದಿಗಿಂತ ಹೆಚ್ಚಿನ ರೈತರು ಕೃಷಿ ಬಗ್ಗೆ ಒಲವು ವ್ಯಕ್ತಪಡಿಸಿರುವುದರಿಂದ ಇಲಾಖೆಯು ಈ ಬಾರಿ ಗುರಿ ಮೀರಿ ಸಾಧನೆ ಮಾಡುವ ಸಾಧ್ಯತೆಗಳಿವೆ.
ಈ ಬಾರಿ ಜಿಲ್ಲೆಯ ಒಟ್ಟು ಒಂಭತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಜೂನ್ ಅಂತ್ಯದವರೆಗೆ 5963 ಮಂದಿ ರೈತರು ಒಟ್ಟು 2575 ಕ್ವಿಂಟಾಲ್ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕಳೆದ ವರ್ಷ 5116 ರೈತರು 2204 ಕಿಂಟ್ವಾಲ್ ಬಿತ್ತನೆ ಬೀಜವನ್ನು ಪಡೆದುಕೊಂಡಿದ್ದರು. ಅದೇ ರೀತಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ದಲ್ಲಿ 170 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರು ಈಗಾಗಲೇ ಖರೀದಿಸಿದ್ದಾರೆ.
ಎಂ.ಒ.4ಗೆ ಬಹುಬೇಡಿಕೆ: ಈ ಬಾರಿ ಬಹುಬೇಡಿಕೆ ವ್ಯಕ್ತವಾಗಿರುವುದರಿಂದ ಎಲ್ಲ ಕೇಂದ್ರಗಳಲ್ಲಿ ದಾಸ್ತಾನು ಇರಿಸಿದ್ದ ಕರಾವಳಿಯ ಮಣ್ಣಿಗೆ ಒಗ್ಗುವ ಎಂ.ಒ.4 ಬಿತ್ತನೆ ಬೀಜ ಈಗಾಗಲೇ ಖಾಲಿಯಾಗಿದೆ.
ಕಳೆದ ವರ್ಷ ಇಲಾಖೆಯು ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ಬೀಜ ನಿಗಮದಿಂದ ಸುಮಾರು 2000 ಕ್ವಿಂಟಾಲ್ ಎಂಓ 4 ಬಿತ್ತನೆ ಬೀಜವನ್ನು ತರಿಸಿತ್ತು. ಆದರೆ ಈ ವರ್ಷ ನಿಗಮದಲ್ಲಿದ್ದ ಎಲ್ಲ ದಾಸ್ತಾನು ಅಂದರೆ 2518 ಕ್ವಿಂಟಾಲ್ ಬೀಜಗಳನ್ನು ತರಿಸಲಾಗಿತ್ತು. ಆದರೂ ಹೆಚ್ಚಿನ ಬೇಡಿಕೆ ಇರುವು ದರಿಂದ ಎಂಓ 4 ಬೀಜ ಅವಧಿಗೆ ಮುನ್ನವೇ ಖಾಲಿಯಾಗಿದೆ.
ಪ್ರತಿ ವರ್ಷವೂ 1800-2000 ಕ್ವಿಂಟಾಲ್ವರೆಗೆ ಎಂ.ಒ.4 ಬಿತ್ತನೆ ಬೀಜವನ್ನು ರೈತರು ಖರೀದಿಸುತ್ತಿದ್ದರು. ಆದರೆ ಇದಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಈ ತಳಿಯ ದಾಸ್ತಾನು ಖಾಲಿಯಾಗಿದ್ದು, ಇದಕ್ಕೆ ಪರ್ಯಾಯವಾಗಿ ಉಮಾ, ಜ್ಯೋತಿ ತಳಿಯನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಸತೀಶ್ ಬಿ. ತಿಳಿಸಿದ್ದಾರೆ.
ರೈತ ಸಂಪರ್ಕ ಕೇಂದ್ರವಲ್ಲದೆ, ಕೆಲವು ಕಡೆ ರೈತರ ಮಧ್ಯೆಯೇ ಬೀಜ ಖರೀದಿಸುವ ಪ್ರಕ್ರಿಯೆ ನಡೆಯುತ್ತದೆ. ಇನ್ನು ಕೆಲವರು ತಾವೇ ಬೀಜವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಹೀಗೆ ಈ ಬಾರಿ ಕೃಷಿ ಮಾಡುವ ರೈತರ ಸಂಖ್ಯೆ ಇನ್ನು ಹೆಚ್ಚಾಗಿರುವ ಸಾಧ್ಯತೆ ಕೂಡ ಇರುತ್ತದೆ. ಹೊರಗಡೆಯಿಂದ ಮರಳಿ ಬಂದವರು ತಮ್ಮನ್ನು ಮತ್ತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಕಡೆ ಹಡೀಲು ಬಿಟ್ಟ ಭೂಮಿಯಲ್ಲೂ ಕೃಷಿ ಚಟುವಟಿಕೆಯನ್ನು ಆರಂಭಿಸಲಾಗಿದೆ. ಈ ಬಾರಿ ಯಾವತ್ತೂ ಬಾರದ ಹೊಸಬರು ಕೂಡ ಬೀಜ ಖರೀದಿಸಲು ಬಂದಿದ್ದಾರೆ.
-ಸತೀಶ್ ಬಿ., ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ ಉಡುಪಿ
ಕೊರೋನ ಲಾಕ್ಡೌನ್ನಿಂದಾಗಿ ಬೆಂಗಳೂರು, ಮಹಾರಾಷ್ಟ್ರ, ದುಬೈ ಯಲ್ಲಿ ಕೆಲಸ ಮಾಡುತ್ತಿದ್ದ ನಾವು, ಮೂರು ತಿಂಗಳುಗಳಿಂದ ಊರಿನಲ್ಲಿಯೇ ಇದ್ದೇವೆ. ಸದ್ಯ ಅಲ್ಲಿಗೆ ಮರಳಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇಲ್ಲ. ಆದುದರಿಂದ ನಮ್ಮದೇ ಹಡಿಲು ಬಿದ್ದ ಕೃಷಿಭೂಮಿಯಲ್ಲಿ ಈ ಬಾರಿ ಭತ್ತ ಬೆಳೆಯಲು ಇಚ್ಛಿಸಿದ್ದೇವೆ.
-ಅರುಣ್ ಶೆಟ್ಟಿ, ನೈಲಾಡಿ.