ಸಾಮಾಜಿಕ ಪರಿಸರ ಕಾಳಜಿ ಇಂದಿನ ಅಗತ್ಯ: ವಲಯ ಅರಣ್ಯಾಧಿಕಾರಿ ಶ್ರೀಧರ್
ಮಂಗಳೂರು, ಜು.6: ಹಸಿರು ಕರಾವಳಿ ಅಭಿಯಾನದ ಅಂಗವಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ದ.ಕ. ಜಿಲ್ಲಾ ಘಟಕ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ‘ನನಗೊಂದು ಮರ-ಮನೆಗೊಂದು ಮರ’ ಗಿಡ ನೆಡುವ ಕಾರ್ಯಕ್ರಮವು ಕುದ್ರೋಳಿಯ ಮೌಲಾನಾ ಆಝಾದ್ ಮೋಡೆಲ್ ಸ್ಕೂಲ್ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಹೊಂದಬೇಕಾದರೆ ಮೊದಲು ನಮ್ಮ ಮನಸ್ಸಲ್ಲಿ ಗಿಡ ನೆಡುವ ಸಂಕಲ್ಪ ಉಳ್ಳವರಾಗಬೇಕು. ಆಗ ಮಾತ್ರ ಪರಿಸರದ ಬಗ್ಗೆ ಚಿಂತಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ಪರಿಸರದ ಕಾಳಜಿ ಇಂದಿನ ಅಗತ್ಯ ಎಂದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂದರ್ ಮತ್ತು ಕುದ್ರೋಳಿ ವಾರ್ಡ್ನಲ್ಲಿ ‘ಗ್ರೀನ್ ಕವರ್ ಶೇಕಡಾ ಶೂನ್ಯವಿದೆ ಎಂದು ಅಧ್ಯಯನ ಸಂಸ್ಥೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಒ ಹಮ್ಮಿಕೊಂಡ ಈ ಅಭಿಯಾನವು ಶ್ಲಾಘನೀಯ. ಹಸಿರು ಕರಾವಳಿ ಅಭಿಯಾನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ನ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್ ಮಾತನಾಡಿ, ಎಲ್ಲ ಧರ್ಮಗ್ರಂಥಗಳು ಪರಿಸರ ಸಂರಕ್ಷಿಸುವ ಸಂದೇಶಗಳನ್ನು ನೀಡಿದೆ. ಆದರೆ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಮರಗಿಡಗಳನ್ನು ನಾಶಮಾಡಿ ಪರಿಸರ ಮಾಲಿನ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಈ ಕಾರಣದಿಂದ ಪ್ರಾಣಿ ಪಕ್ಷಿಗಳಿಗೂ ಬದುಕಲು ಸಾಧ್ಯವಾಗದೆ ಅರಣ್ಯದಿಂದ ನಗರದತ್ತ ಬರುತ್ತಿರುವುದು ವಿಷಾದನೀಯ ಎಂದರು.
ಈ ಸಂದರ್ಭ ನಿವೃತ್ತ ಶಿಕ್ಷಕ ಹನೀಫ್ ಮಾಸ್ಟರ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಾ, ಎಸ್ಐಒ ಸದಸ್ಯ ನಿಹಾಲ್ ಕುದ್ರೋಳಿ ಮಾತನಾಡಿದರು. ಎಸ್ಐಒ ಜಿಲ್ಲಾ ಅಧ್ಯಕ್ಷ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿದರು.
ಕುದ್ರೋಳಿ ಕಾರ್ಪೊರೇಟರ್ ಶಂಶುದ್ದೀನ್ ಎಚ್.ಬಿ.ಟಿ., ಎಚ್.ಆರ್.ಎಸ್. ಕರ್ನಾಟಕ ಕ್ಯಾ.ಅಮೀರ್ ಕುದ್ರೋಳಿ, ಸಮಾಜ ಸೇವಕ ಆಸಿಫ್ ಕುದ್ರೋಳಿ, ಎಸ್ಐಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರು, ನಿಝಾಮ್ ಉಳ್ಳಾಲ ಉಪಸ್ಥಿತರಿದ್ದರು.