ಉಡುಪಿ: ವಿದ್ಯುತ್ ತಂತಿ ತುಂಡಾಗಿ ಬಿದ್ದು ರೈತ ಮೃತ್ಯು
ಉಡುಪಿ, ಜು.9: ಗದ್ದೆಯಲ್ಲಿ ಅಂಚುಕಟ್ಟುವ ಕೆಲಸ ಮಾಡುತಿದ್ದ ರೈತರೊಬ್ಬರ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಅಪರಾಹ್ನ ಬ್ರಹ್ಮಾವರ ತಾಲೂಕು ಚೇರ್ಕಾಡಿಯಲ್ಲಿ ಗುರುವಾರ ಸಂಭವಿಸಿದೆ.
ಮೃತರನ್ನು ಚೇರ್ಕಾಡಿ ಮಾಬೆಟ್ಟು ನಿವಾಸಿ ಸಾಧು ಹರಿಜನ ಬಿನ್ ಬಿಕ್ರ (65) ಎಂದು ಗುರುತಿಸಲಾಗಿದೆ. ಬೇರೆಯವರ ಗದ್ದೆಯನ್ನು ಬೇಸಾಯಕ್ಕೆ ಹಸನುಗೊಳಿಸುವ ಕೆಲಸ ಮಾಡುತಿದ್ದ ಸಾಧು ಅವರ ಬೆನ್ನ ಮೇಲೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರೆಂದು ಹೇಳಲಾಗಿದೆ. ಘಟನೆ ಅಪರಾಹ್ನ 1:30ರಿಂದ 2:00ರ ಮಧ್ಯೆ ಸಂಭವಿಸಿದೆ.
ಚೇರ್ಕಾಡಿ ಮಾಬೆಟ್ಟು ನಿವಾಸಿಯಾದ ಸಾಧು ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತಿದ್ದರು. ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಪೊಲೀಸ್ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಕೈಗೊಂಡರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.