ಮಸೀದಿ,ಮದ್ರಸ ಸಿಬ್ಬಂದಿಗಳಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಣೆಗೆ ದಾರಿಮಿ ಉಲಮಾ ಒಕ್ಕೂಟ ಒತ್ತಾಯ
ಪರಂಗಿಪೇಟೆ: ಕೊರೋನದಿಂದಾಗಿ ಮದ್ರಸ ಬಂದ್ ಆಗಿರುವ ಕಾರಣದಿಂದಾಗಿ ನೂರಾರು ಮದ್ರಸ ಅದ್ಯಾಪಕರು ಮತ್ತು ಮಸೀದಿ ಸಿಬ್ಬಂದಿಗಳು ಕೆಲಸ ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಪರದಾಡುವ ಸ್ಥಿತಿ ಉಂಟಾಗಿದೆ. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಕೆಲವು ಮೊಹಲ್ಲಾ ಸಮಿತಿಯವರು ಈ ತನಕ ಧಾರ್ಮಿಕ ಗುರುಗಳಿಗೆ ವೇತನ ನೀಡಿದ್ದರೂ ಹಲವು ಸಮಿತಿಗಳು ಸಿಬ್ಬಂದಿಗಳನ್ನು ವಜಾ ಮಾಡಿ ನಂತರ ಖಾಲಿ ಹುದ್ದೆ ಭರ್ತಿ ಮಾಡಲು ಮುಂದೆ ಬಂದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಧಾರ್ಮಿಕ ವೃತ್ತಿನಿರತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮುಂದೆ ಬರಬೇಕಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಒತ್ತಾಯಿಸಿದೆ.
ವಳಚ್ಚಿಲ್ ದರ್ಗಾ ವಠಾರದಲ್ಲಿ ಉಲಮಾ ಮುಖಂಡರು ಸಭೆ ಸೇರಿ ದಾರಿಮಿ ಒಕ್ಕೂಟದ ವತಿಯಿಂದ ಇತ್ತೀಚೆಗೆ ಸಂಗ್ರಹಿಸಲಾಗಿದ್ದ ಸಾಂತ್ವನ ಫಂಡ್ ನಿಂದ ಸಂಕಷ್ಟದಲ್ಲಿದ್ದ ಉಸ್ತಾದರು ಮತ್ತು ಮದರಸ ಅಧ್ಯಾಪಕರಿಗೆ ಸಹಾಯ ನಿಧಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮೊಹಲ್ಲಾಗಳಲ್ಲಿ ದುಡಿಯುತ್ತಿದ್ದ ಉಸ್ತಾದರ ಸಂಕಟವನ್ನು ಅರಿತು ಸಾಂತ್ವನ ನೀಡಲು ಪ್ರತಿ ಮೊಹಲ್ಲಾಗಳು ಮುಂದಾಗಬೇಕೆಂದು ಕಾನ್ಫರೆನ್ಸ್ ಸಭೆಯು ಅಭಿಪ್ರಾಯಪಟ್ಟಿತು. ಎಸ್ ಬಿ ದಾರಿಮಿಯವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮೌಲಾನ ಅಝೀಝ್ ದಾರಿಮಿ ಚೊಕ್ಕಬೆಟ್ಟು, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಕೆ ಎಲ್ ದಾರಿಮಿ, ಕಾಸಿಮ್ ದಾರಿಮಿ ಕುಕ್ಕಿಲ ದಾರಿಮಿ ಉಸ್ತಾದರು ಭಾಗವಹಿಸಿದ್ದರು.