ಕ್ಯಾಂಪ್ಕೊ ಸಂಸ್ಥಾಪನಾ ದಿನಾಚರಣೆ
ಮಂಗಳೂರು, ಜು.11: ನಗರದ ಕ್ಯಾಂಪ್ಕೊ ಮುಖ್ಯ ಕಚೇರಿಯಲ್ಲಿ ಕ್ಯಾಂಪ್ಕೊ ಸಂಸ್ಥಾಪನಾ ದಿನಾಚರಣೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ದಿ.ವಾರಣಾಶಿ ಸುಬ್ರಾಯ ಭಟ್ಟರು ಒಬ್ಬ ದಾರ್ಶನಿಕರು. ಅವರ ನೇತೃತ್ವದಲ್ಲಿ ಕೃಷಿಕ ಸಮುದಾಯದ ಉದ್ಧಾರಕ್ಕಾಗಿ 1973 ಜುಲೈ 11ರಂದು ಕ್ಯಾಂಪ್ಕೊ ಸಂಸ್ಥೆ ರೂಪುಗೊಂಡಿತು ಎಂದರು.
ಕಳೆದ 47 ವರ್ಷಗಳಲ್ಲಿ ತನ್ನ ಸದಸ್ಯ ಬೆಳೆಗಾರರಿಗೆ ತಮ್ಮ ಉತ್ಪನ್ನಗಳಿಗೆ ಸ್ಥಿರ ಬೆಲೆಯೊಂದಿಗೆ ಸೂಕ್ತ ಮಾರುಕಟ್ಟೆ ಒದಗಿಸಿದೆ. ಸದ್ಯ ಸಂಸ್ಥೆಯು ಹೆಮ್ಮರವಾಗಿ ಬೆಳೆದು, 1,850 ಕೋಟಿ ರೂ.ನ ಬೃಹತ್ ವಹಿವಾಟು ದಾಖಲಿಸಿರುವುದು ದೊಡ್ಡ ಸಾಧನೆಯಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಹಿರಿಯ ನಿರ್ದೇಶಕ ಎ.ಎಸ್.ಭಟ್ ಅವರು ಸಂಸ್ಥೆಯ ಹುಟ್ಟು, ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಕಿಶೋರ್ಕುಮಾರ್ ಕೊಡ್ಗಿ, ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿದರು. ಪ್ರಭಾರ ವ್ಯವಸ್ಥಾಪಕ ನಿರ್ದೇಶಕಿ ರೇಷ್ಮಾ ಮಲ್ಯ ಉಪಸ್ಥಿತರಿದ್ದರು.
ಪುತ್ತೂರು ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಮತ್ತು ದೇಶಾದ್ಯಂತವಿರುವ ಕ್ಯಾಂಪ್ಕೊ ಶಾಖೆಗಳಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು.