ಉಡುಪಿ ನ್ಯಾಯಾಲಯದ 2.8ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ
ಉಡುಪಿ,ಜು.13: ಉಡುಪಿ ನ್ಯಾಯಾಲಯದ ಸಂಕೀರ್ಣದ ಮೂರನೇ ಮಹಡಿಯಲ್ಲಿ 2.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಮಗಾರಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಜು.13ರಂದು ಚಾಲನೆ ನೀಡಿದರು.
ಬೆಂಗಳೂರಿನಿಂದ ವೀಡಿಯೋ ಸಂವಾದದ ಮೂಲಕ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಉಡುಪಿ ಜಿಲ್ಲಾ ಆಡಳಿತ್ಮಾಕ ನ್ಯಾಯಮೂರ್ತಿ ಅಶೋಕ ಎಸ್.ಕಿನಗಿ ಮಾತನಾಡಿ, ವಕೀಲರ ಸಂಘದ ವಿವಿಧ ಬೇಡಿಕೆಗಳು ತಮ್ಮ ಗಮನಕ್ಕೆ ಈಗಾಗಲೆ ಬಂದಿದ್ದು ಅವುಗಳನ್ನು ಆದ್ಯತೆಯ ನೆಲೆಯಲ್ಲಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್-19 ಇದೇ ರೀತಿ ಮುಂದುವರಿದರೆ ವಕೀಲ, ನ್ಯಾಯಾಂಗ ಸಿಬ್ಬಂದಿಗಳ ಆಹವಾಲುಗಳನ್ನು ವಿಡಿಯೋ ಸಂವಾದ ಮೂಲಕ ಕೇಳಲು ಸಿದ್ದನಿದ್ದೇನೆ. ಕಾಮಗಾರಿ ಅದಷ್ಟು ಕ್ಷಿಪ್ರಗತಿಯಲ್ಲಿ ಸಾಗಲಿ ಎಂದು ಅವರು ಶುಭಹಾರೈಸಿದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದ್ದರು. ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಯಾದವ್ ವನಮಾಲ ಆನಂದ ರಾವ್, ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಲಾವಣ್ಯ, ಎರಡನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಭವಾನಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಇರ್ಫಾನ್, ಹೆಚ್ಚುವರಿ ನ್ಯಾಯಾಧೀಶ ಮಂಜುನಾಥ, ಮೂರನೇ ಹೆಚ್ಚುವರಿ ನ್ಯಾಯಾಧೀಶ ಮಹಾಂತೇಶ್, ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶೆ ನಿರ್ಮಲ, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಕಾವೇರಿ, ಪಿಡಬ್ಲುಡಿ ಕಾರ್ಯ ಪಾಲಕ ಇಂಜಿನಿಯರ್ ಅಶೋಕ್ ಉಪಸ್ಥಿತರಿದ್ದರು.
ವಕೀಲ ಸಂಘದ ಪ್ರದಾನ ಕಾರ್ಯದರ್ಶಿ ರೋನಾಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.