ಹರೇಕಳ ಸ್ವಯಂ ಲಾಕ್ ಡೌನ್ ಯಶಸ್ವಿ: ಕಾರ್ಯಕರ್ತರಿಗೆ ಅಭಿನಂದನಾ ಸಭೆ
ಕೊಣಾಜೆ: ಹರೇಕಳ ಗ್ರಾಮದಲ್ಲಿ ಕೋವಿಡ್ -19 ಹೆಚ್ಚುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಒಂದು ವಾರಗಳ ಕಾಲ ಸ್ವಯಂ ಲಾಕ್ ಡೌನ್ ಮಾಡಲು ಒಪ್ಪಿಕೊಳ್ಳುವುದರೊಂದಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಸಹಕಾರ ನೀಡಿದ್ದಾರೆ. ಗ್ರಾಮದ ಪ್ರತಿಯೊಬ್ಬರೂ ಸಂಪೂರ್ಣ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಬಸ್ಸು, ದೋಣಿಯವರು, ಇತರ ವಾಹನಗಳ ಮಾಲಕರು ಸಹಕಾರ ನೀಡಿದ್ದಾರೆ. ಈ ತೀರ್ಮಾನದಲ್ಲಿ ಸ್ವಾರ್ಥ, ರಾಜಕೀಯ ಮೇಲೈಕೆ ಇಲ್ಲದ ಕಾರಣ ಯಶಸ್ವಿಯಾಗಿದೆ ಎಂದು ತಾಲ್ಲೂಕು ಮಾಜಿ ಸದಸ್ಯ ಮುಸ್ತಫಾ ಮಲಾರ್ ಅವರು ಅಭಿಪ್ರಾಯಪಟ್ಟರು.
ಹರೇಕಳ ಗ್ರಾಮದಲ್ಲಿ ಲಾಕ್ ಡೌನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಸ್ಥರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಪಂಚಾಯಿತಿ ಉಪಾಧ್ಯಕ್ಷ ದೆಬ್ಬೇಲಿಗುತ್ತು ಮಹಾಬಲ ಹೆಗ್ಡೆ ಮಾತನಾಡಿ, ಲಾಕ್ ಡೌನ್ ತೀರ್ಮಾನ ಕೈಗೊಂಡಾಗ ಯುವಕರ ತಂಡ ನಿಸ್ವಾರ್ಥವಾಗಿ ಕೈಜೋಡಿಸಿ ಗ್ರಾಮದ ಹಿತಕ್ಕಾಗಿ ತಮ್ಮ ಬದ್ದತೆ ಪ್ರದರ್ಶಿಸಿದ್ದಾರೆ. ಇದಕ್ಕಾಗಿ ಪಂಚಾಯಿತಿಯ ನಯಾಪೈಸೆ ಬಳಸಿಲ್ಲ, ಅಗತ್ಯ ಸಹಾಯ ದಾನಿಗಳು ನೀಡಿದ್ದಾರೆ ಎಂದು ತಿಳಿಸಿದರು.
ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ಬಶೀರ್ ಉಂಬುದ, ಅಶ್ರಫ್ ಹರೇಕಳ, ಎಚ್.ಶಾಲಿಹ್, ಸತ್ತಾರ್ ಬಾವಲಿಗುಲಿ, ಗುಲಾಬಿ, ದೇವಕಿ, ಪ್ರಮುಖರಾದ ಬಶೀರ್, ಮುಸ್ತಫಾ, ಖಾದರ್, ಸಿದ್ದೀಕ್, ಇಮ್ತಿಯಾಝ್, ಅಕ್ಬರ್ ಮುನೀರ್ ಇನ್ನಿತರರು ಉಪಸ್ಥಿತರಿದ್ದರು.
ವಾಮನ್ ರಾಜ್ ಪಾವೂರು ಸ್ವಾಗತಿಸಿದರು.
'ಗ್ರಾಮದಲ್ಲಿ ಕೊರೊನ ನಿಯಂತ್ರಣ ಮತ್ತು ಬಗ್ಗೆ ಜಾಗೃತಿಗಾಗಿ ಸಭೆ ನಡೆಸಿದಾಗ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಲಾಕ್ ಡೌನ್ ಬಗ್ಗೆ ಒಮ್ಮತದ ಅಭಿಪ್ರಾಯ ನೀಡಿ, ಗ್ರಾಮದ ಮೂರು ಗಡಿಗಳನ್ನು ಬಂದ್ ಮಾಡಿ ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿ ನಡೆ ಅನುಸರಿಸಿದ್ದಾರೆ'
ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಕೀಯ ಮುಖಂಡ