ಅಂಬೇಡ್ಕರ್ ಮನೆ ಮೇಲೆ ದಾಳಿಗೈದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮನವಿ
ಉಡುಪಿ, ಜು.14: ಇತ್ತೀಚೆಗೆ ಮುಂಬೈ ದಾದರ್ನಲ್ಲಿರುವ ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಾಜ್ ಗೃಹದ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯು ಜು.13 ರಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಇಡೀ ಭಾರತದ ಉದ್ದಗಲಕ್ಕೂ ಮನುವಾದಿ ಮನಸ್ಸಿನ ದೇಶದ್ರೋಹಿಗಳು ಅಂಬೇಡ್ಕರ್ ಬರೆದ ಸಂವಿಧಾನ, ಆಶಯ, ತತ್ವ, ಕೃತಿಗಳ ಮೇಲೆ ನಿರಂತರ ವಾಗಿ ದಾಳಿ ನಡೆಸುತ್ತಲೇ ಬರುತ್ತಿವೆ. ಈಗ ಇನ್ನೂ ಮುಂದುವರಿದು ಶೋಷಿತ ಸಮುದಾಯದವರ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರ್ ಅವರ ಮನೆಯ ಮೇಲೆಯೇ ದಾಳಿ ನಡೆಸಲಾಗಿದೆ. ಈ ದಾಳಿಯ ಹಿಂದೆ ಯಾವುದೋ ಮನುವಾದದ ಷಡ್ಯಂತ್ರ ಅಡಗಿದೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವೀಕರಿಸಿದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಭಾಸ್ಕರ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಪ್ರಸಾದ್ ಬಂಟಕಲ್ಲು ಉಪಸ್ಥಿತರಿದ್ದರು.