ಬೆಳ್ತಂಗಡಿ: ಲಾಕ್ಡೌನ್ ಗೆ ಉತ್ತಮ ಪ್ರತಿಕ್ರಿಯೆ
ಬೆಳ್ತಂಗಡಿ: ಜಿಲ್ಲಾಡಳಿತ ಘೋಷಿಸಿರುವ ಲಾಕ್ಡೌನ್ ಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಬೆಳಗ್ಗೆ 11 ಗಂಟೆಯ ನಂತರ ಸಂಪೂರ್ಣ ಬಂದ್ ಆಗಿದ್ದು, ಜನಜೀವನ ಸ್ತಬ್ಧವಾಗಿದೆ.
ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಸೇರಿದಂತೆ ಪ್ರಮುಖ ಪೇಟೆಗಳಲ್ಲಿ ಬೆಳಗ್ಗೆ 11 ಗಂಟೆ ತನಕ ದಿನಸಿ, ತರಕಾರಿ ಮೀನು ಹಾಗೂ ಮಾಂಸದ ಅಂಗಡಿಗಳು ತೆರೆದುಕೊಂಡಿದ್ದರೂ ಖರೀದಿದಾರರ ಸಂಖ್ಯೆ ತೀರಾ ವಿರಳವಾಗಿತ್ತು. ಮೆಡಿಕಲ್, ಕ್ಲಿನಿಕ್ಗಳು ಎಂದಿನಂತೆ ತೆರೆದುಕೊಂಡಿದೆ.
ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ಗಳು ರಸ್ತೆಗೆ ಇಳಿದಿಲ್ಲ, ಬೆಳಗ್ಗೆ ಆಟೋ ರಿಕ್ಷಾ ಮತ್ತು ಇತರ ವಾಹನಗಳ ಓಡಾಟ ಇದ್ದರೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಕೆಲವು ಹೋಟೆಲ್ಗಳು ಮಾತ್ರ ತೆರೆದುಕೊಂಡಿದ್ದು, ಹೆಚ್ಚಿನ ಹೋಟೆಲ್ಗಳು ಬೆಳಗ್ಗೆಯಿಂದಲೇ ಬಾಗಿಲು ತೆರಿದಿಲ್ಲ, 11 ಗಂಟೆ ಹೊತ್ತಿಗೆ ಪೇಟೆಗಳಲ್ಲಿ ಅಂಗಡಿ, ಹೋಟೆಲ್ಗಳು ಸಂಪೂರ್ಣ ಬಂದ್ ಆಗಿತ್ತು. ಆಟೋ ಹಾಗೂ ಇತರ ವಾಹನಗಳು ಸಂಚಾರವನ್ನು ಸ್ಥಗಿತಗೊಳಿಸಿದವು. ಪೊಲೀಸರು ಪೇಟೆಗಳಲ್ಲಿ ಸಂಚರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು. ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಮನೆಗಳಿಗೆ ಹಿಂತಿರುಗಿಸಿದರು.
ತಾಲೂಕಿನಾಧ್ಯಂತ ಭಾರೀ ಮಳೆಯೂ ಸುರಿಯುತ್ತಿದ್ದ ಹಿಮ್ನಲೆಯಲ್ಲಿ ಜನರು ಮನೆಗಳಿಂದ ಹೊರಬರಲು ಹಿಂಜರಿಯುತ್ತಿದ್ದು ಜನರ ಓಡಾಟ ಬಹುತೇಕ ಸ್ಥಗಿತಗೊಂಡಿತ್ತು.