ಕೊರೋನ ವೈರಸ್ ರೋಗ ತಡೆಗೆ ಡಾ.ಕಜೆಯ ಮದ್ದು ಪ್ರಾಯೋಗಿಕವಾಗಿ ನೀಡಲು ರೈತ ಸಂಘ ಆಗ್ರಹ
ಮಂಗಳೂರು, ಜು.18: ಕೊರೋನದಿಂದ ದೇಶಕ್ಕೆ ದೇಶವೇ ತತ್ತರಿಸಿದೆ. ಈ ಮಧ್ಯೆ ಡಾ. ಗಿರಿಧರ ಕಜೆ ಕಂಡು ಹಿಡಿದ ಆಯುರ್ವೇದಿಕ್ ಮದ್ದನ್ನು ದ.ಕ. ಜಿಲ್ಲೆಯ ಜನರಿಗೆ ಪ್ರಾಯೋಗಿಕವಾಗಿ ನೀಡಬೇಕು ಎಂದು ದ.ಕ. ಜಿಲ್ಲಾಡಳಿತಕ್ಕೆ ರೈತ ಸಂಘ ಹಸಿರು ಸೇನೆ ಮನವಿ ಮಾಡಿದೆ.
ಮೋದಿ ನೇತೃತ್ವದ ಕೇಂದ್ರ ಸರಕಾರ ಆತ್ಮನಿರ್ಭರ್ ಸ್ವದೇಶಿ ಅಂದೋಲನಕ್ಕೆ ಒತ್ತು ಕೊಡುತ್ತಿದೆ. ಈ ಸಂದರ್ಭ ಗಿಡ ಮೂಲಿಕೆಗಳನ್ನು ಆಧರಿಸಿ ಆಯುರ್ವೇದ ಔಷಧಿ ಚಿಕಿತ್ಸೆಗೆ ಒತ್ತು ಕೊಡಬೇಕು ಮತ್ತು ಇದನ್ನು ದ.ಕ. ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಮನವಿ ಮಾಡಿದ್ದಾರೆ.
ಡಾ. ಕಜೆಯವರ ಗಿಡಮೂಲಿಕೆಗಳನ್ನು ಆಧರಿಸಿ ಆಯುರ್ವೇದ ಮದ್ದನ್ನು ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೂ, ಅಲ್ಲದವರಿಗೂ ನೀಡಿದ್ದು, ಅವರು ಗುಣಮುಖರಾದ ವರದಿಗಳು ಬರುತ್ತಿದೆ. ಈ ರೋಗದ ಮತ್ತು ಅದರ ಚಿಕಿತ್ಸೆ ಬಗ್ಗೆ ಇನ್ನಿಲ್ಲದ ಭಯ ಹುಟ್ಟಿಸಿ ಆಸ್ಪತ್ರೆಗಳು ಲಕ್ಷಾಂತರ ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿವೆ. ಹಾಗಾಗಿ ದ.ಕ. ಜಿಲ್ಲಾಡಳಿತವು ಡಾ. ಕಜೆಯವರ ಮದ್ದನ್ನು ಪ್ರಾಯೋಗಿಕವಾಗಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.