ಉಡುಪಿಯಲ್ಲಿ ಮೂರನೆ ರವಿವಾರವೂ ಸಂಪೂರ್ಣ ಲಾಕ್ಡೌನ್
ಉಡುಪಿ, ಜು.19: ರಾಜ್ಯ ಸರಕಾರದ ಆದೇಶದಂತೆ ಮೂರನೆ ಹಾಗೂ ಉಡುಪಿ ಜಿಲ್ಲಾಧಿಕಾರಿಗಳ ಗಡಿ ಸೀಲ್ಡೌನ್ ಆದೇಶದ ಬಳಿಕ ಮೊದಲ ರವಿವಾರವಾಗಿರುವ ಇಂದು ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೆಡಿಕಲ್, ಹಾಲು, ಆಸ್ಪತ್ರೆ ಹೊರತು ಪಡಿಸಿ ಎಲ್ಲ ಅಂಗಡಿಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ತುರ್ತು ಅಗತ್ಯ ಇರುವವರು ಮತ್ತು ಸರಕು ವಾಹನಗಳ ಓಡಾಟ ಮಾತ್ರ ಕಂಡುಬಂತು. ಕುಂದಾಪುರ, ಕಾರ್ಕಳ, ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ ಸಂಪೂರ್ಣ ಲಾಕ್ಡೌನ್ ಆಗಿತ್ತು. ಜಿಲ್ಲೆಯ 10 ಗಡಿ ಪ್ರದೇಶಗಳ ಸೀಲ್ಡೌನ್ ಮುಂದುವರೆದಿದೆ. ಉಳಿದ ದಿನ ಜಿಲ್ಲೆಯಲ್ಲಿ ಲಾಕ್ಡೌನ್ ಬದಲು ಸೀಲ್ ಡೌನ್ ವಿಧಿಸಿರುವುದರಿಂದ ರವಿವಾರವೂ ಸೀಲ್ಡೌನ್ ಮಾತ್ರವೇ ಎಂಬ ಗೊಂದಲ ಜನರಲ್ಲಿ ನಿನ್ನೆಯವರೆಗೆ ಉಂಟಾಗಿತ್ತು. ಆದರೂ ಬೆಳಗ್ಗೆಯಿಂದ ಯಾರು ಕೂಡ ಅನಗತ್ಯ ರಸ್ತೆಗೆ ಇಳಿಯದೆ ಮನೆಯಲ್ಲಿ ಕುಳಿತು ಲಾಕ್ಡೌನ್ ಯಶಸ್ವಿಗೊಳಿಸಿದರು.
ಉಡುಪಿ ನಗರದ ಕಲ್ಸಂಕ ಮತ್ತು ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಯಿತು. ವಿವಿಧ ಪೊಲೀಸ್ ಠಾಣೆಯಲ್ಲಿ ಪೊಲೀಸರು ಗಸ್ತು ತಿರುಗಿ ಪರಿಶೀಲನೆ ನಡೆಸಿದರು. ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಇಂದು ನಗರದ ವಿವಿಧ ಕಡೆಗಳಲ್ಲಿ 80 ಮಂದಿ ಅಸಹಾಯಕರು, ಅಂಗವಿಕಲರು ಹಾಗೂ ಭಿಕ್ಷುಕರಿಗೆ ಊಟ ವಿತರಿಸಿದರು.