ದ.ಕ.ಜಿಲ್ಲೆಯಲ್ಲಿ ಮಳೆ ಇಳಿಮುಖ
ಮಂಗಳೂರು, ಜು.20: ದ.ಕ.ಜಿಲ್ಲೆಯಲ್ಲಿ ಕಳೆದ ವಾರವಿಡೀ ಸತತವಾಗಿ ಧಾರಾಕಾರ ಮಳೆ ಸುರಿದಿದ್ದರೆ, ಈ ವಾರದ ಆರಂಭದಲ್ಲೇ ಮಳೆಯಲ್ಲಿ ಇಳಿಮುಖ ಕಂಡು ಬಂದಿದೆ. ರವಿವಾರ ಮತ್ತು ಸೋಮವಾರ ಮಳೆಯ ಬದಲು ಬಿಸಿಲು ಕಾಣಿಸಿಕೊಂಡಿದೆ. ಆದರೆ ಅಗಾಗ ಮೋಡ ಕವಿದ ವಾತಾವರಣವಿತ್ತು. ರವಿವಾರ ರಾತ್ರಿಯೂ ಮಳೆ ಸುರಿದಿರಲಿಲ್ಲ.
ಜಿಲ್ಲೆಯಲ್ಲಿ ಕಳೆದ ವಾರ ಮೂರು ದಿನ ಸತತ ಮಳೆಯ ಪರಿಣಾಮ ಹಲವು ಕಡೆ ಪ್ರಾಕೃತಿಕ ವಿಕೋಪ ಕಂಡು ಬಂದಿತ್ತು. ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾದ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಶುಕ್ರವಾರ ಸ್ವಲ್ಪ ಏರಿಕೆ ಕಂಡು ಬಂದಿದ್ದರೂ ಮಳೆ ಇಳಿಮುಖಗೊಳ್ಳುತ್ತಲೇ ನದಿನೀರಿನ ಮಟ್ಟದಲ್ಲಿಯೂ ಇಳಿಕೆ ಕಂಡು ಬಂದಿದೆ.
ಕಳೆದ ವರ್ಷ ಜು.20ರಂದು ಜಿಲ್ಲೆಯಲ್ಲಿ ಸರಾಸರಿ 79.4 ಮಿ.ಮೀ. ಮಳೆಯಾಗಿದ್ದರೆ ಈ ವರ್ಷ ಸೋಮವಾರ (ಜು.20)ರಂದು ಕೇವಲ 2.2 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಜು.20ರಂದು ಬೆಳ್ತಂಗಡಿಯಲ್ಲಿ 108.7 ಮಿ.ಮೀ, ಮಳೆಯಾಗಿದ್ದರೆ, ಈ ದಿನ 2.6 ಮಿ.ಮೀ ಮಳೆಯಾಗಿದೆ. ಉಳಿದಂತೆ ಬಂಟ್ವಾಳದಲ್ಲಿ ಕಳೆದ ವರ್ಷದ ಜು.20ರಂದು 63.0 ಮಿ.ಮೀ. (ಈ ವರ್ಷದ ಜು.20ರಂದು 1.1 ಮಿ.ಮೀ), ಮಂಗಳೂರು ತಾಲೂಕಿನಲ್ಲಿ 96.8 ಮಿ.ಮೀ, (1.2 ಮಿ.ಮೀ.), ಪುತ್ತೂರಿನಲ್ಲಿ 43.3 ಮಿಮೀ. (0.2ಮಿ.ಮೀ.), ಸುಳ್ಯದಲ್ಲಿ 85 ಮಿ.ಮೀ( 6.0 ಮಿ.ಮೀ.) ಮಳೆಯಾಗಿದೆ.