ಕಾಪು: ವೈದ್ಯೆಯಿಂದ ಬ್ಯಾಂಕಿಗೆ ವಂಚಿಸಲು ಯತ್ನ ಆರೋಪ; ಪ್ರಕರಣ ದಾಖಲು
ಕಾಪು, ಜು.24: ವೈದ್ಯೆಯೊಬ್ಬರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಕೆಎಂಸಿ ಆಸ್ಪತ್ರೆ ಮತ್ತು ಮಣಿಪಾಲ ಮಾಹೆಯಲ್ಲಿ ವೈದ್ಯೆ ಹಾಗೂ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವು ದಾಗಿ ಹೇಳಿಕೊಂಡು ಬ್ಯಾಂಕ್ ಆಫ್ ಬರೋಡಾ ಮೂಡಬೆಟ್ಟು ಶಾಖೆಗೆ ಬಂದ ಡಾ.ರಿನೆಟ್ ಸೋನಿಯಾ ಡಿಸೋಜ ಎಂಬವರು, ತನಗೆ ವಾಹನ ಖರೀದಿಸಲು 7,80,000ರೂ. ಮತ್ತು ತನ್ನ ಸಹೋದರನಿಗೆ ಕಾರು ಖರೀದಿಸಲು 16,00,000ರೂ. ಸಾಲ ನೀಡುವಂತೆ ಕೇಳಿಕೊಂಡಿದ್ದರು. ಅದಕ್ಕಾಗಿ ಬ್ಯಾಂಕ್ ಖಾತೆ ತೆರೆಯಲು ಜು.13ರಂದು ದಾಖಲಾತಿಗಳನ್ನು ಸಲ್ಲಿಸಿದ್ದರು. ಬಳಿಕ ಸಾಲದ ಅರ್ಜಿಯೊಂದಿಗೆ ಸಲ್ಲಿಸಿದ ಮಣಿಪಾಲ ಮಾಹೆಯ ವೇತನ ಸ್ಲಿಪ್ಗಳನ್ನು ಪರಿಶೀಲಿಸಿದಾಗ ಆಕೆ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇಲ್ಲ ಎಂಬುದಾಗಿ ಮಾಹೆ ಇ-ಮೈಲ್ ಮೂಲಕ ದೃಡಪತ್ರವನ್ನು ನೀಡಿದೆ ಎಂದು ದೂರಲಾಗಿದೆ.
ಈಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬ್ಯಾಂಕಿಗೆ ಮೋಸ ಮಾಡಿ ಸಾಲ ಪಡೆಯುವ ಉದ್ದೇಶದಿಂದ ಸಾಲಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಬ್ಯಾಂಕಿನ ಮೆನೇಜರ್ ಅಲ್ವಿನಾ ಡಿಸೋಜ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.