ಪೊಲೀಸ್ ಹೆಸರಿನಲ್ಲಿ ವಾಹನ ಚಾಲಕರಿಂದ ಹಣ ವಸೂಲಿ: ಆರೋಪಿಯ ಸೆರೆ
ಮಂಜೇಶ್ವರ, ಜು.27: ಮಂಜೇಶ್ವರ ಠಾಣೆಯ ಪೊಲೀಸ್ ಸಿಬ್ಬಂದಿ ಎಂದು ನಂಬಿಸಿ ವಾಹನ ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ರಮೀಝ್(28) ಬಂಧಿತ ಆರೋಪಿ.
ಘಟನೆ ವಿವರ: ಮಂಗಳೂರಿನಿಂದ ಕೊಚ್ಚಿಗೆ ಮೀನು ಸಾಗಿಸುತ್ತಿದ್ದ ಲಾರಿಯೊಂದು ತಲಪಾಡಿ ಚೆಕ್ಪೋಸ್ಟ್ನಲ್ಲಿ ತಪಾಸಣೆಗೊಳಗಾಗಿ ಸಂಚಾರ ಮುಂದುವರಿಸುತ್ತಿರುವಾಗಿ ದಾರಿ ಮಧ್ಯೆ ಆರೋಪಿ ರಮೀಝ್ ಅದನ್ನು ತಡೆದು ನಿಲ್ಲಿಸಿದನೆನ್ನಲಾಗಿದೆ. ತಾನು ಮಂಜೇಶ್ವರ ಠಾಣೆಯ ಸಿಬ್ಬಂದಿ, ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ಗೆ ನೀಡುವಂತೆ ಬೆದರಿಸಿ ಹಣ ಪಡೆದಿರುವುದಾಗಿ ದೂರಲಾಗಿದೆ. ಈ ವೇಳೆ ಚಾಲಕನ ಮೊಬೈಲ್ ಫೋನ್ ನಂಬರ್ ಪಡೆದಿದ್ದ ರಮೀಝ್ ಬಳಿಕವೂ ಬೆದರಿಕೆ ಹಾಕಿದನೆನ್ನಲಾಗಿದೆ.
ಈ ಬಗ್ಗೆ ಚಾಲಕ ನೀಡಿದ ಮಾಹಿತಿಯಂತೆ ಲಾರಿ ಮಾಲಕ ರಮೀಝ್ನ ಮೊಬೈಲ್ ಫೋನ್ ನಂಬರ್ ಸಹಿತ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story