ಡಿವೈಡರ್ ಹಾರಿ ಬಂದ ಕಾರು ಢಿಕ್ಕಿ : ರಸ್ತೆ ಬದಿಯಲ್ಲಿ ಮಾತನಾಡುತ್ತಾ ನಿಂತಿದ್ದ ಯುವಕ ಮೃತ್ಯು
ಆಕಾಶ್
ಬ್ರಹ್ಮಾವರ, ಆ.3: ತನ್ನ ಮನೆಯ ಎದುರು ರಾ. ಹೆದ್ದಾರಿ ಬದಿಯಲ್ಲಿ ಸ್ನೇಹಿತ ನೊಂದಿಗೆ ಮಾತನಾಡುತಿದ್ದ ಯುವಕನೊಬ್ಬನಿಗೆ ಅತಿವೇಗವಾಗಿ ಧಾವಿಸಿ ಬಂದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ನ್ನು ಹಾರಿ ಬಂದು ಢಿಕ್ಕಿಯಾಗಿ ಎದುರಿನ ಗದ್ದೆಗೆ ಬಿದ್ದ ಪರಿಣಾಮ ಯುವಕ ಮೃತಪಟ್ಟ ಘಟನೆ ಧರ್ಮಾವರಂ ಸಭಾಂಗಣದ ಎದುರಿನ ಕುಮ್ರಗೋಡು ಬಸ್ ನಿಲ್ದಾಣದ ಎದುರು ನಡೆದಿದೆ.
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟ ಯುವಕನನ್ನು ಕುಮ್ರಗೋಡಿನ ಆಕಾಶ್ ಪೂಜಾರಿ (29) ಎಂದು ಗುರುತಿಸಲಾಗಿದೆ. ಕಾರು ಬ್ರಹ್ಮಾವರ ಕಡೆಯಿಂದ ಕುಂದಾಪುರ ದತ್ತ ಸಾಗುತ್ತಿತ್ತು. ಘಟನೆ ಇಂದು ಮಧ್ಯಾಹ್ನದ ಸುಮಾರಿಗೆ ನಡೆದಿದೆ ಎಂದು ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.
ಆಕಾಶ್ ಪೂಜಾರಿ, ಮಂಗಳೂರಿನಲ್ಲಿ ತನ್ನೊಂದಿಗೆ ಕೆಲಸ ಮಾಡುವ ಒಂದೇ ರೂಮಿನಲ್ಲಿರುವ ಸ್ನೇಹಿತ ಶರತ್ ಪೂಜಾರಿ ಎಂಬವರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಶರತ್ ಪೂಜಾರಿ ಅವರು ರೂಮಿನ ಬೀಗದ ಕೈಯನ್ನು ಪಡೆದುಕೊಳ್ಳಲು ಬೈಕ್ನಲ್ಲಿ ಬಂದಿದ್ದರು. ಬೀಗದ ಕೈಯನ್ನು ಮನೆಯಿಂದ ಹಿಡಿದುಕೊಂಡು ಬಂದ ಶರತ್, ಹೆದ್ದಾರಿ ಬದಿಯಲ್ಲಿ ಮಾತನಾಡುತ್ತಾ ನಿಂತಿದ್ದರು.
ಅದೇ ವೇಳೆ ಬ್ರಹ್ಮಾವರದ ಕಡೆಯಿಂದ ವೇಗವಾಗಿ ಧಾವಿಸಿ ಬಂದ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ನ್ನು ದಾಟಿ ನೇರವಾಗಿ ಬೈಕ್ಗೆ ಬಡಿದಿತ್ತು. ಅದೇ ವೇಳೆ ಬೈಕ್ ಪಕ್ಕ ನಿಂತಿದ್ದ ಆಕಾಶ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು, ಶರತ್ ಪೂಜಾರಿ ಕಾಲಿಗೆ ಪೆಟ್ಟಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.