ಸಚಿವ ಈಶ್ವರಪ್ಪರ ಹೇಳಿಕೆಗೆ ಖಂಡನೆ
ಮಂಗಳೂರು, ಆ.6: ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ದೇಶದ ಮುಸ್ಲಿಮರು ಗೌರವಿಸಿದ್ದಾರೆ. ತೀರ್ಪಿನಂತೆ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ಈ ಮಧ್ಯೆ ಸಚಿವ ಕೆಎಸ್ ಈಶ್ವರಪ್ಪ ‘ಇನ್ನು ನಾವು ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಯನ್ನು ಬಾಬರಿ ಮಸೀದಿಯ ಮಾದರಿಯಲ್ಲಿ ಕೆಡವಿ ಮಂದಿರವನ್ನು ನಿರ್ಮಿಸುತ್ತೇವೆ’ ಎಂದು ಕೋಮು ಸಾಮರಸ್ಯ ಕಡದುವಂತಹ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಮಂಗಳೂರು ನಗರ ಅಧ್ಯಕ್ಷ ವಹಾಬ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
*ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಂದ ಇಂತಹ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈಶ್ವರಪ್ಪ ರಾಜ್ಯದ ಸಚಿವ ಎಂಬುದನ್ನು ಮರೆತು ಬಿಜೆಪಿಯ ಮುಖಂಡ ಎಂಬಂತೆ ಮಾತನಾಡುತ್ತಿರುವುದು ಸರಿಯಲ್ಲ. ಈಶ್ವರಪ್ಪ ದೇಶದ ಸಂವಿಧಾನದ ನಿಯಮಾವಳಿಯಂತೆ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸಿದ್ದರು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕಿದೆ. ಈಶ್ವರಪ್ಪರ ಹೇಳಿಕೆ ಖಂಡನೀಯ. ಅವರು ತನ್ನ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಮಾನವ್ ಸಮಾನತಾ ಮಂಚ್ನ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.