ಕದ್ರಿಯಲ್ಲಿ ರಸ್ತೆ ಅಪಘಾತ : ಯುವತಿ ಗಂಭೀರ ಗಾಯ
ಮಂಗಳೂರು, ಆ.7: ನಗರದ ಕದ್ರಿ ಕಂಬಳ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕು ಕೆದಿಲ ಗ್ರಾಮದವರಾಗಿದ್ದು, ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಾಣಿಶ್ರೀ (22) ಗಾಯಾಳು. ಕದ್ರಿ ಕಂಬಳದಲ್ಲಿ ವಾಸವಿರುವ ಇವರು ಶುಕ್ರವಾರ ಅತ್ತಾವರ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕದ್ರಿ ಕಂಬಳದಲ್ಲಿ ಕಾರು ಢಿಕ್ಕಿಯಾಗಿ ಅಪಘಾತ ಸಂಭವಿಸಿತು.
ಯುವತಿ ಕಾರಿನ ಎದುರು ಭಾಗಕ್ಕೆ ಎಸೆಯಲ್ಪಟ್ಟು ಅಲ್ಲಿಂದ ಅವರನ್ನು ನಾಲ್ಕೈದು ಮೀಟರ್ ದೂರಕ್ಕೆ ತಳ್ಳಿಕೊಂಡು ಹೋಗಿತ್ತು. ಕಾರಿನ ಕೆಳಗೆ ಸಿಲುಕಿದ್ದ ಅವರನ್ನು ಕಾರಿನ ಎದುರು ಭಾಗವನ್ನು ಎತ್ತಿ ಯುವತಿಯನ್ನು ರಕ್ಷಿಸಲಾಯಿತು. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2019ರ ಡಿ.1ರಂದು ಇದೇ ಸ್ಥಳದಲ್ಲಿ ಲಾರಿಯೊಂದು ಆಟೋ ರಿಕ್ಷಾಕ್ಕೆ ಢಿಕ್ಕಿಯಾಗಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದರು. ಆ ಬಳಿಕ ಇಲ್ಲಿ ಹಂಪ್ಸ್ ಅಳವಡಿಸಲಾಗಿತ್ತು. ಆದಾಗ್ಯೂ, ವಾಹನಗಳ ಅತಿ ವೇಗ ಸಂಚಾರವೇ ಚಲಾಯಿಸುವುದರಿಂದ ಅಪಘಾತ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.