ಜೋಕಟ್ಟೆ ಹಾಜಿ ಗುತ್ತು ಮುಹಮ್ಮದ್ ನಿಧನ
ಮಂಗಳೂರು, ಆ.14: ಜೋಕಟ್ಟೆ ನಿವಾಸಿ ಹಾಜಿ ಗುತ್ತು ಬಿ. ಮುಹಮ್ಮದ್ (76) ಗುರುವಾರ ರಾತ್ರಿ ಉಪ್ಪಿನಂಗಡಿಯಲ್ಲಿರುವ ತನ್ನ ಅಳಿಯನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪ್ರತಿಷ್ಠಿತ ಗುತ್ತು ಮನೆತನದಲ್ಲಿ ಹುಟ್ಟಿ ಬೆಳೆದ ಅವರು ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ಆಡಳಿತ ಸಮಿತಿಯ ಹಲವು ಜವಾಬ್ದಾರಿಯುತ ಸ್ಥಾನಗಳನ್ನು ನಿಭಾಯಿಸಿದ್ದರು. ಅಲ್ಲದೆ ಜೋಕಟ್ಟೆಯ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಜೋಕಟ್ಟೆಯ ಅಂಜುಮಾನ್ ಖುವ್ವತುಲ್ ಇಸ್ಲಾಮ್ ಇದರ ಅಧ್ಯಕ್ಷರಾಗಿ, ಅಂಜುಮನ್ ವಿದ್ಯಾಸಂಸ್ಥೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು.
ಗುತ್ತುಮನೆತನದಲ್ಲಿ ಹುಟ್ಟಿ ಬೆಳೆದು ಜೋಕಟ್ಟೆ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಪ್ರಮುಖರಲ್ಲಿ ಓರ್ವರಾಗಿದ್ದ ಮುಹಮ್ಮದ್ ಅವರು ಧಾರ್ಮಿಕ-ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಜೋಕಟ್ಟೆಯ ಯುವಕ ಮಂಡಲದ ಅಧ್ಯಕ್ಷ, ಜೋಕಟ್ಟೆ ಪಂಚಾಯತ್ ಅಧ್ಯಕ್ಷ, ಬಾಳ ಮಂಡಲ ಪಂಚಾಯತ್ ಸದಸ್ಯ, ಸುರತ್ಕಲ್ ಪರಿಸರದ ಹದಿನಾರು ಜಮಾಅತ್ ಒಕ್ಕೂಟದ ಅಧ್ಯಕ್ಷ, ಜೋಕಟ್ಟೆ ಮುಹಿಯದ್ದೀನ್ ಹೊಸ ಜುಮಾ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಯಾಗಿದ್ದ ಮೃತರು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು.