ಗಾಂಜಾ ಮಾರಾಟದ ವಿರುದ್ಧ ಪೊಲೀಸ್ ಕಾರ್ಯಾಚರಣೆ: ಪೊಲೀಸ್ ವಶದಲ್ಲಿದ್ದ ಓರ್ವ ಆರೋಪಿ ಪರಾರಿ ; ಇಬ್ಬರ ಬಂಧನ
ಕುಂದಾಪುರ, ಸೆ.16: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಸೆ.15 ರಂದು ಕೋಟೇಶ್ವರ ಹೀರೋ ಶೋರೂಮ್ ಬಳಿ ಮೂವರು ಬಂಧಿತರ ಪೈಕಿ ಓರ್ವ ಆರೋಪಿ ಹೆಚ್ಚಿನ ತನಿಖೆ ವೇಳೆ ಪೊಲೀಸರನ್ನು ದೂಡಿ ಹಾಕಿ ಪರಾರಿ ಯಾಗಿರುವ ಘಟನೆ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂಡುಗೋಪಾಡಿಯ ಮುಶ್ರಿಫ್ ಅಹಮ್ಮದ್ (24), ವಡೇರಹೋಬಳಿಯ ಶ್ರೇಯಸ್ ದೇವಾಡಿಗ (23), ಕೋಟೇಶ್ವರ ಪ್ರೀತಮ್(23) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿ, 33,000 ರೂ. ಮೌಲ್ಯದ 1ಕೆಜಿ 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಬಳಿಕ ಪೊಲೀಸರು ಇವರನ್ನು ಗಾಂಜಾ ಸರಬರಾಜು ಮಾಡಿದ ವ್ಯಕ್ತಿಗಳನ್ನು ತೋರಿಸಿಕೊಡಲು ರಾತ್ರಿ ವೇಳೆ ಬಿಗಿ ಭದ್ರತೆಯಲ್ಲಿ ಮಂಗಳೂರು ತೊಕ್ಕೋಟು ಸಮೀಪ ಕರೆದುಕೊಂಡು ಹೋಗಿದ್ದರು. ಅಲ್ಲಿ ಮುಶ್ರಿಫ್ ಅಹಮ್ಮದ್ ಫೋನ್ ಕರೆ ಮಾಡಿದ್ದು, ಆಗ ಒಂದು ಕಾರಿನಲ್ಲಿ ಇಬ್ಬರು ಬಂದಿ ದ್ದರು. ಅವರಿಂದ ಮುಶ್ರಿಫ್ ಗಾಂಜಾ ಪಡೆದು ಶ್ರೇಯಸ್ಗೆ ನೀಡಿದ್ದ ಎನ್ನಲಾಗಿದೆ.
ಈ ವೇಳೆ ಪೊಲೀಸರು ಕಾರಿನಲ್ಲಿ ಬಂದವರನ್ನು ಹಿಡಿಯಲು ಪ್ರಯತ್ನಿಸಿದಾಗ ಮುಶ್ರಿಫ್ ಅಹಮ್ಮದ್ ಪೊಲೀಸರನ್ನು ದೂಡಿ ಹಾಕಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಇಬ್ಬರು ಬಂದ ಅದೇ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾನೆ. ಶ್ರೇಯಸ್ ದೇವಾಡಿಗನ ಕೈಯಲ್ಲಿದ್ದ 25,000ರೂ. ಮೌಲ್ಯದ 720ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಸೇವನೆ: ಐವರು ವಶಕ್ಕೆ
ಗಾಂಜಾ ಸೇವನೆಗೆ ಸಂಬಂಧಿಸಿ ಸೆ.14ರಂದು ಉಡುಪಿ ನಗರದ ಅಜ್ಜರ ಕಾಡು ಭುಜಂಗ ಪಾರ್ಕ್ ಬಳಿ ಅಜ್ಜರಕಾಡುವಿನ ಅಕ್ಷಯ್ ಪೂಜಾರಿ (19) ಮತ್ತು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗಳ್ಳಿ ಕಳಂಜೆ ಬಳಿ ಮಾರ್ಗೋಳಿಯ ರೋಶಲ್ ಡಿಮೆಲ್ಲೋ(24) ಹಾಗೂ ಕೋಟೇಶ್ವರ ಗ್ರಾಮದ ಬಡಾಕೆರೆ ಬಳಿ ಕೋಟೇಶ್ವರ ಬಡಾಕೆರೆಯ ಕಾರ್ತಿಕ್ ವಿ.(23) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.15ರಂದು ಸಿದ್ದಾಪುರ ಗ್ರಾಮದ ಹೆನ್ನಾಬೈಲ್ ಎಂಬಲ್ಲಿ ಹೊಸಂಗಡಿಯ ನಾಗರಾಜ ಪೈ (24) ಮತ್ತು ಹೊಸಂಗಡಿ ಗೇರುಸಾಲು ನಿವಾಸಿ ಅಬ್ದುಲ್ ರೆಹಮಾನ್(56) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.