ಬಜ್ಪೆ ಸಮೀಪದ ‘ಮುರ’ದಲ್ಲಿ ರಸ್ತೆಗೆ ಜಾರಿದ ನೀರಿನ ಟ್ಯಾಂಕ್
ಮಂಗಳೂರು, ಸೆ.18 ಬಜ್ಪೆ ಸಮೀಪದ ಮೂಡುಪೆರಾರ್ ಗ್ರಾಮದ ಈಶ್ವರಕಟ್ಟೆಯ ಮುರ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕ್ ತೆರವು ಕಾರ್ಯಾಚರಣೆ ವೇಳೆ ಟ್ಯಾಂಕ್ ಪಕ್ಕದ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ಗುರುವಾರ ನಡೆದಿದೆ.
ಬಜ್ಪೆವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳಿಗೆ ಅಡಚಣೆಯುಂಟಾಗುವ ರೀತಿಯಲ್ಲಿದ್ದ ನೀರಿನ ಈ ಬೃಹತ್ ಟ್ಯಾಂಕ್ನ್ನು ತೆರವು ಗೊಳಿಸುವಂತೆ ತಂತ್ರಜ್ಞರು ವರದಿ ನೀಡಿದ್ದರು. ಅದರಂತೆ ಟ್ಯಾಂಕನ್ನು ತೆರವುಗೊಳಿಸುವ ವೇಳೆ ಈ ಅವಘಡ ಸಂಭವಿಸಿದೆ.
ನೀರಿನ ಹೊಸ ಟ್ಯಾಂಕ್ ನಿರ್ಮಿಸಲು ಅನುದಾನ ಮಂಜೂರಾಗಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ಮುಗಿಸಿತ್ತು. ಗುರುವಾರ ಹಿಟಾಚಿ ಮೂಲಕ ಹಳೆ ಟ್ಯಾಂಕ್ನ ಪಿಲ್ಲರ್ ನೆಲಸಮಗೊಳಿಸುತ್ತಿದ್ದಾಗ ಟ್ಯಾಂಕ್ ಏಕಾಏಕಿಯಾಗಿ ಕುಸಿದು ರಸ್ತೆಗೆ ಜಾರಿತು. ಇದರಿಂದ ಮೂಡುಪೆರಾರ ಈಶ್ವರಕಟ್ಟೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸದ್ಯ ಟ್ಯಾಂಕ್ನ್ನು ರಸ್ತೆಯಿಂದ ತೆರವುಗೊಳಿಸಲಾಗಿದ್ದು, ವಾಹನ ಸಂಚಾರ ಆರಂಭಗೊಂಡಿದೆ.
Next Story