ಬೆಳ್ತಂಗಡಿ: ಸ್ಕೂಟರ್ ಕಳವು ಪ್ರಕರಣ ; ಮೂವರು ಆರೋಪಿಗಳು ಸೆರೆ
ಬೆಳ್ತಂಗಡಿ : ಉಜಿರೆ ಗ್ರಾಮದಲ್ಲಿ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಸ್ಕೂಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಉಜಿರೆ ಗ್ರಾಮದ ಹಳೆಪೇಟೆಯ ನಿವಾಸಿ ಅರುಣ್ ಶೆಟ್ಟಿ (30), ಬೆಳ್ತಂಗಡಿ ಕನ್ಯಾಡಿ ಗ್ರಾಮದ ಗುರಿಪಳ್ಳದ ಹೇಮಂತ್ ಬಿರ್ವ ಯಾನೆ ಹರ್ಷಿತ್ (20), ಉಜಿರೆ ಗ್ರಾಮದ ಸಂಪತ್ ಯಾನೆ ಶ್ಯಾಮ್(24) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಉಜಿರೆಯಲ್ಲಿ ಸ್ಥಳೀಯ ಮಹಿಳೆಯೊಬ್ಬರು ನಿಲ್ಲಿಸಿ ಹೋಗಿದ್ದ ಸ್ಕೂಟಿ ಕಳ್ಳತನವಾಗಿತ್ತು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಇದರ ತನಿಖೆಯಲ್ಲಿ ತೊಡಗಿದ್ದ ವೇಳೆ ಸೆ.17ರಂದು ಸಂಜೆ ಉಜಿರೆ ಗ್ರಾಮದ ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂವರು ಯುವಕರು ಸ್ಕೂಟರ್ ಅನ್ನು ಬಿಚ್ಚುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಬೆಳ್ತಂಗಡಿ ಪಿ.ಎಸ್.ಐ ನಂದಕುಮಾರ್ ನೇತೃತ್ವದ ತಂಡ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಜಿರೆಯ ಗ್ಯಾರೇಜ್ ನಲ್ಲಿ ನಿಲ್ಲಿಸಿದ ಸ್ಕೂಟರ್ ಕಳ್ಳತನ ಮಾಡಿರುವುದು ಮತ್ತು ಬೇರೆ ಎರಡು ಸ್ಕೂಟರ್ ಕಳ್ಳತನ ಮಾಡಿ ಅದರ ಬಿಡಿ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.