ದ.ಕ. ಜಿಲ್ಲೆ : ಕೋವಿಡ್ಗೆ ಐವರು ಬಲಿ, 432 ಮಂದಿಗೆ ಕೊರೋನ ಸೋಂಕು
ಮಂಗಳೂರು, ಸೆ.19: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದಾಗಿ ಮತ್ತೆ ಐವರು ಮೃತಪಟ್ಟಿದ್ದಾರೆ. ಈ ನಡುವೆ ಶನಿವಾರ ಒಂದೇ ದಿನ 432 ಮಂದಿಗೆ ಸೋಂಕು ತಗುಲಿದ್ದು, 404 ಮಂದಿ ಗುಣಮುಖರಾಗಿದ್ದಾರೆ.
ಮೃತರ ಪೈಕಿ ಮಂಗಳೂರು ತಾಲೂಕಿನ ಮೂವರು, ಬೆಳ್ತಂಗಡಿ ಹಾಗೂ ಹೊರಜಿಲ್ಲೆಯ ತಲಾ ಒಬ್ಬರು ಇದ್ದಾರೆ. ಮೃತರೆಲ್ಲ ಕೊರೋನ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಜಿಲ್ಲೆಯಲ್ಲಿ ಮೃತರ ಸಂಖ್ಯೆ 477ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
432 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶನಿವಾರ ಒಂದೇ ದಿನ 432 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಸೋಂಕಿತರದಲ್ಲಿ ಸಾಮಾನ್ಯ ಶೀತ ಲಕ್ಷಣ ಹೊಂದಿದವರ ಸಂಖ್ಯೆಯೇ (187) ಅಧಿಕವಿದೆ. ತೀವ್ರ ಉಸಿರಾಟ ತೊಂದರೆ-128, ಸೋಂಕಿತರ ಸಂಪರ್ಕದಲ್ಲಿದ್ದ 98 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 119 ಮಂದಿಗೆ ಯಾರಿಂದ ಸೋಂಕು ಹರಡಿದೆ ಎನ್ನುವುದನ್ನು ಜಿಲ್ಲಾ ಆರೋಗ್ಯ ಇಲಾಖೆಯು ಪತ್ತೆ ಕಾರ್ಯದಲ್ಲಿ ತೊಡಗಿದೆ.
135 ಪುರುಷರು ಹಾಗೂ 91 ಮಹಿಳೆಯರು ಸೇರಿದಂತೆ 226 ಮಂದಿಯಲ್ಲಿ ಕೊರೋನ ಲಕ್ಷಣಗಳು ಕಂಡುಬಂದಿವೆ. ಇನ್ನು, 101 ಪುರುಷರು, 105 ಮಹಿಳೆಯರು ಸಹಿತ 206 ಮಂದಿಯಲ್ಲಿ ಕೊರೋನ ಲಕ್ಷಣಗಳು ಕಂಡುಬಂದಿಲ್ಲ. ಮಂಗಳೂರು ತಾಲೂಕಿನಲ್ಲಿ ಎಂದಿನಂತೆಯೇ ಶನಿವಾರವೂ ಹೆಚ್ಚು ಪ್ರಕರಣಗಳು (194) ದಾಖಲಾಗಿವೆ. ಬಂಟ್ವಾಳ-68, ಪುತ್ತೂರು-71, ಸುಳ್ಯ-13, ಬೆಳ್ತಂಗಡಿ-47, ಹೊರಜಿಲ್ಲೆಯ 39 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 19,754ಕ್ಕೆ ಏರಿಕೆಯಾಗಿದೆ.
404 ಮಂದಿ ಕೊರೋನಮುಕ್ತ: ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 312 ಮಂದಿ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 92 ಮಂದಿ ಸೇರಿದಂತೆ 404 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 14,748 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4,529 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.