ದ.ಕ. ಜಿಲ್ಲೆಯಲ್ಲಿ ಮುಂದುವರಿದ ಮಳೆ : ಬಜ್ಪೆ ಸಮೀಪ ಭೂ ಕುಸಿತ
ಮನೆ ಕುಸಿದುಬಿದ್ದು ಇಬ್ಬರಿಗೆ ಗಾಯ
ಮಂಗಳೂರು, ಸೆ. 20: ದ.ಕ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಮಧ್ಯೆ ಹಲವು ಕಡೆ ಹಾನಿಯಾದ ಬಗ್ಗೆ ವರದಿಯಾಗಿದೆ.
ನಗರ ಹೊರವಲಯದ ನೀರುಮಾರ್ಗ ಮತ್ತು ಬಜ್ಪೆ ಸಮೀಪದ ಆದ್ಯಪಾಡಿ ಎಂಬಲ್ಲಿ ಭೂ ಕುಸಿದ ಪರಿಣಾಮ ಸಂಪರ್ಕ ರಸ್ತೆ ಕಡಿದು ಹೋಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅದಲ್ಲದೆ ಸರಿಪಳ್ಳ ಎಂಬಲ್ಲಿ ಮನೆ ಯೊಂದು ಕುಸಿದ ಪರಿಣಾಮ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಜಪ್ಪಿನಮೊಗರು, ಕುದ್ರೋಳಿ ಮತ್ತಿತರ ಕಡೆ ನೀರು ನಿಲುಗಡೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ನಗರದ ಫಳ್ನೀರ್ ರಸ್ತೆಯ ಪಕ್ಕ ಮರವೊಂದು ಉರುಳಿ ಬಿದ್ದ ಬಗ್ಗೆ ಅಗ್ನಿಶಾಮಕ ಠಾಣೆಯ ಮೂಲಗಳು ತಿಳಿಸಿವೆ. ಶನಿವಾರ ಮುಂಜಾನೆ ಆರಂಭಗೊಂಡ ಗಾಳಿ, ಮಳೆಯು ತನ್ನ ತೀವ್ರತೆ ಹೆಚ್ಚಿಸಿದ್ದು ರಾತ್ರಿಯಿಡೀ ಬಿರುಸಿನ ಮಳೆಯಾಗಿದೆ.