ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಜಲಾವೃತ
ಉಡುಪಿ, ಸೆ. 20: ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ಪ್ರವಾಹ ದಿಂದ ನೂರಾರು ಮನೆಗಳು ಜಲಾವೃತಗೊಂಡಿದ್ದು, ನೆರೆಯ ಸಿಲುಕಿದ ಹಲವು ಕುಟುಂಬಗಳನ್ನು ರಕ್ಷಿಸಿ ಸ್ಥಳಾಂತರ ಮಾಡಲಾಗಿದೆ.
ಹೂಡೆ, ಕಂಬಳತೋಟ, ಪಡುಕುದ್ರು, ತಿಮ್ಮಣ್ಣ ಕುದ್ರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಇಲ್ಲಿನ ನೂರಕ್ಕೂ ಅಧಿಕ ಮಂದಿಯನ್ನು ಸ್ಥಳೀಯರು ಹಾಗೂ ಹ್ಯುಮನಿಟಿರಿಯನ್ ರಿಲೀಫ್ ಸೊಸೈಟಿ ತಂಡ ಸ್ಥಳಾಂತರಿಸಿ, ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯ ಕಲ್ಪಿಸಿದೆ.
ಕೆಲವು ಮಂದಿ ತಮ್ಮ ಸಂಬಂಧಿಕರ ಮನೆಗೆ ತೆರಳಿದರೆ, ಇನ್ನು ಕೆಲವರಿಗೆ ಕೆಮ್ಮಣ್ಣು ಚರ್ಚ್ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸೊಸೈಟಿ ವತಿಯಿಂದ 300 ಮಂದಿ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಳೆ ಯಿಂದ ಹೂಡೆ- ಕೋಡಿಬೆಂಗ್ರೆ ಹಾಗೂ ಹೂಡೆ- ಸಂತೆಕ್ಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ವೆಲ್ಫೇರ್ ಪಾರ್ಟಿಯ ಕಾರ್ಯಕರ್ತರು ಈ ಸಂದರ್ಭ ಸಹಕರಿಸಿದರು.
Next Story