ಡ್ರಗ್ಸ್ ಪ್ರಕರಣ : ಕರಾವಳಿ ಮೂಲದ ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್ ?
ಮಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಕರಾವಳಿ ಮೂಲದ ಕಿರುತೆರೆ ನಿರೂಪಕಿ ಅನುಶ್ರೀ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿಗೆ ಗುರುವಾರ ಬೆಳಗ್ಗೆಯೇ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಡಾನ್ಸರ್ ಕಿಶೋರ್ ಅಮನ್ ಶೆಟ್ಟಿಯನ್ನು ಮಂಗಳೂರು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ‘ತಾನು ಪಾರ್ಟಿಯಲ್ಲಿದ್ದ ವೇಳೆ ತನ್ನ ಜೊತೆಗೆ ಯಾರ್ಯಾರು ಇದ್ದರೆಂಬುದನ್ನು ತಿಳಿಸಿದ್ದಾನೆ. ಈತ ಹೇಳಿದ ಹೆಸರುಗಳ ಪಟ್ಟಿಯಲ್ಲಿ ಆ್ಯಂಕರ್ ಅನುಶ್ರೀ ಹೆಸರೂ ಇದೆ. ಇದರಿಂದ ಜಾಗೃತರಾದ ಮಂಗಳೂರು ಪೊಲೀಸರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು. ಅದರದಲ್ಲಿ ಅನುಶ್ರೀ ಕೂಡ ಭಾಗವಹಿಸಿದ್ದರು ಎಂಬುದಾಗಿ ಕಿಶೋರ್ ಶೆಟ್ಟಿ ಬಾಯ್ಬಿಟ್ಟಿದ್ದಾನೆಂದು ತಿಳಿದುಬಂದಿದೆ. ಅನುಶ್ರೀ ಮೂಲತಃ ಮಂಗಳೂರಿನವರು. ಆದರೆ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಮಂಗಳೂರು ಪೊಲೀಸರು ಅನುಶ್ರೀಯನ್ನು ವಿಚಾರಣೆಗೊಳಪಡಿಸಲು ಬೆಂಗಳೂರಿನ ಅವರ ಮನೆ ಹುಡುಕಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.