ಉಡುಪಿ : ತೀವ್ರಗೊಂಡ ಎನ್ಎಚ್ಎಂ ಮುಷ್ಕರ
ಉಡುಪಿ, ಸೆ.24: ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ ಎಂ) ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿರುವ ಮುಷ್ಕರ ಮೂರನೇ ದಿನವನ್ನು ಪೂರ್ಣಗೊಳಿಸಿದೆ. ಇಂದು ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇವರು, ಮನೆಯಲ್ಲೇ ಇದ್ದು ಕೆಲಸಕ್ಕೂ ಗೈರುಹಾಜರಾಗಿದ್ದರು.
ಕೇವಲ ಬಿ.ಆರ್.ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಎನ್ಎಚ್ಎಂ ಸ್ಪೆಷಲಿಸ್ಟ್ ವೈದ್ಯರು ಮಾತ್ರ ಇಂದು ಕರ್ತವ್ಯಕ್ಕೆ ಹಾಜರಾಗಿ ದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಉಳಿದಂತೆ ಕೊರೋನಕ್ಕೆ ಸಂಬಂಧಿಸಿದ ವೈದ್ಯರು, ಸ್ಟಾಫ್ ನರ್ಸ್ಗಳು, ಎಎನ್ಎಂ, ಇ-ಸಂಜೀವಿನಿ ಸಿಬ್ಬಂದಿಗಳು ಹಾಗೂ ತಂತ್ರಜ್ಞರು ಮುಷ್ಕರದಲ್ಲಿ ಭಾಗಿಯಾಗಿದ್ದು ಕೋವಿಡ್-19ಕ್ಕೆ ಸಂಬಂಧಿಸಿದಂತೆ ಯಾವುದೇ ಅಂಕಿಅಂಶಗಳನ್ನು ಅಪ್ಲೋಡ್ ಮಾಡದ ಹಿನ್ನೆಲೆಯಲ್ಲಿ ಪ್ರತಿದಿನ ಆರೋಗ್ಯ ಇಲಾಖೆಯ ಮೂಲಕ ಪ್ರಕಟಗೊಳ್ಳುವ ದೈನಂದಿನ ಕೋವಿಡ್-19 ಬುಲೆಟಿನ್ ಇಂದು ಸಹ ಪ್ರಕಟಗೊಂಡಿಲ್ಲ.
ಜಿಲ್ಲೆಯಲ್ಲಿ ಇಂದು ಸುಮಾರು 160 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಇಲಾಖೆ ಮೂಲ ತಿಳಿಸಿದ್ದು, ಉಳಿದ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದೆ. ಎನ್ಎಚ್ಎಂ ಅಡಿ ನೇಮಕಗೊಂಡ ತಂತ್ರಜ್ಞರೇ ಕೊರೋನಕ್ಕೆ ಸಂಬಂಧಿಸಿದ ಪ್ರತಿದಿನದ ಅಂಕಿಅಂಶಗಳನ್ನು, ವರದಿಗಳನ್ನು ಕಾಲ್ ಸೆಂಟರ್ಗಳ ಮೂಲಕ ಸಂಗ್ರಹಿಸಿ ಇಲಾಖೆಗೆ ನೀಡುತಿದ್ದರು.