ಗುಜ್ಜರಕೆರೆಗೆ ಬಿದ್ದು ವೃದ್ಧೆ ಸಾವು
ಮಂಗಳೂರು, ಸೆ.24: ನಗರದ ಗುಜ್ಜರಕೆರೆಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿದ್ದು, ಘಟನೆಯು ಗುರುವಾರ ಬೆಳಕಿಗೆ ಬಂದಿದೆ.
ಮೃತರನ್ನು ಮಂಗಳಾದೇವಿ ಮಿಷನ್ ಕಂಪೌಂಡ್ ನಿವಾಸಿ ಕಲ್ಯಾಣಿ (75) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ತೇಲುತ್ತಿದ್ದ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅಸೌಖ್ಯದಿಂದ ಬಳಲುತ್ತಿದ್ದ ಕಲ್ಯಾಣಿ ಮನೆಯವರೊಂದಿಗೆ ಊಟ ಮಾಡಿ ಮಲಗಿದ್ದರು. ತಡರಾತ್ರಿ ಮನೆಯ ಸಮೀಪ ಇರುವ ಗುಜ್ಜರಕೆರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಅಥವಾ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮನೆಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
Next Story