ಭಾರತೀಯ ರೆಡ್ಕ್ರಾಸ್ ಸೊಸೈಟಿಗೆ ಮೋಸ: ಉಡುಪಿ ಜಿಲ್ಲಾ ಚೇಯರ್ಮೆನ್ ವಿರುದ್ಧ ಪ್ರಕರಣ ದಾಖಲು
ಉಡುಪಿ, ಸೆ.25: ಭಾರತೀಯ ರೆಡ್ಕ್ರಾಸ್ ಸೊಸೈಟಿಗೆ ಮೋಸ ಮಾಡಿರುವ ಆರೋಪದಲ್ಲಿ ರೆಡ್ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆಯ ಚೇಯರ್ಮೆನ್ ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ರೆಡ್ಕ್ರಾಸ್ ಸೊಸೈಟಿ ಕರ್ನಾಟಕದ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಬಸ್ರೂರು ರಾಜೀವ ಶೆಟ್ಟಿ, ರೆಡ್ಕ್ರಾಸ್ ಸೊಸೈಟಿಯ ಹೆಸರಿನಲ್ಲಿ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿದ್ದಾರೆ. ಮೂಲ ಭಾರತೀಯ ರೆಡ್ಕ್ರಾಸ್ ಸೊಸೈಟಿಗೆ ಮೋಸ ಮಾಡುವ ಉದ್ದೇಶದಿಂದ ಅದರ ಚಿಹ್ನೆ ಮತ್ತು ಟ್ರೇಡ್ ಮಾರ್ಕ್ ಉಪಯೋಗಿಸಿ ತಮ್ಮದೇ ಆದ ಭಾರತೀಯ ರೆಡ್ಕ್ರಾಸ್ ಸೊಸೈಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ ಎಂದು ದೂರಲಾಗಿದೆ.
ಈ ಟ್ರಸ್ಟನ್ನು ಉಡುಪಿಯ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ 2020ರ ಜ.6ರಂದು ನೋಂದಾಯಿಸಿ ಮೂಲ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಮೋಸ ಮಾಡಿರುವುದಾಗಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಬೆಂಗಳೂರು ಇದರ ಚೇಯರ್ಮೆನ್ ಎಸ್.ನಾಗಣ್ಣ ನೀಡಿದ ದೂರಿನಂತೆ ಯುಎಸ್ 420 ಐಪಿಸಿ, 103, 104 ಟ್ರೇಡ್ ಮಾರ್ಕ್ಸ್ ಆ್ಯಕ್ಟ್ ಮತ್ತು 3 ಎಂಬ್ಲೆಮ್ಸ್ ಆ್ಯಂಡ್ ನೇಮ್ಸ್ ಆ್ಯಕ್ಟ್ನಂತೆ ಪ್ರಕರಣ ದಾಖಲಾಗಿದೆ.